ಸಿರುಗುಪ್ಪ : ನಗರದ ತಾಲೂಕು ಕಛೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ಗ್ರಾಮಾಡಳಿತ ಅಧಿಕಾರಿಗಳ ಕೇಂದ್ರ ಸಂಘ ತಾಲೂಕು ಘಟಕದಿಂದ ಗ್ರಾಮಾಡಳಿತ ಅಧಿಕಾರಿಗಳ ಸಮಸ್ಯೆಗಳ ಮತ್ತು ಬೇಡಿಕೆಗಳ ಈಡೇರಿಕೆಗಾಗಿ 2ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರ 2ನೇ ದಿನಕ್ಕೆ ಕಾಲಿಟ್ಟಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಘಟಕವು ಬೆಂಬಲ ನೀಡಿದೆ.
ಗ್ರಾಮಾಡಳಿತ ಸಂಘದ ಅಧ್ಯಕ್ಷ ಮಂಜುನಾಥ.ಹೆಚ್, ಅವರು ಮಾತನಾಡಿ ಮೂಲಭೂತ ಸೌಲಭ್ಯಗಳಿಗಾಗಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುತ್ತಿದ್ದೇವೆ.
ನಮ್ಮ ಬೇಡಿಕೆಗಳಾದ ಗ್ರಾಮಲೆಕ್ಕಾಧಿಕಾರಿಗಳಿಗೆ ಪ್ರತ್ಯೇಕ ಕೊಠಡಿ, ಕುರ್ಚಿ, ಟೇಬಲ್, ಆನ್ಲೈನ್ ಸೇವೆಗಳನ್ನು ನೀಡಲು, ಟ್ಯಾಬ್ ಅಥವಾ ಮೊಬೈಲ್, ಇಲ್ಲವೇ ಲ್ಯಾಪ್ಟಾಪ್ ನೀಡಬೇಕು.
ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ ಕಲ್ಪಿಸುವಂತೆ ಈ ಹಿಂದೆ ಮೊದಲನೆ ಹಂತದಲ್ಲಿ ಮುಷ್ಕರ ನಡೆಸಲಾಗಿದ್ದು, ಸರ್ಕಾರವು ಮೂರು ತಿಂಗಳ ಕಾಲಾವಶವನ್ನು ನೀಡಿತ್ತು.
ಆದರೂ ನಮ್ಮ ಬೇಡಿಕೆಗಳಿಗೆ ಸ್ಪಂದಿಸದ ಕಾರಣ ರಾಜ್ಯಮಟ್ಟದ ನಮ್ಮ ಸಂಘಟನೆಯ ಆದೇಶದಂತೆ ಬೇಡಿಕೆಗಳ ಈಡೇರುವವರೆಗೂ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಗೌರವಾಧ್ಯಕ್ಷ ವಿ.ವಿರುಪಾಕ್ಷಪ್ಪ, ಕಾರ್ಯದರ್ಶಿ ಗುರುರಾಜ.ಟಿ, ಖಜಾಂಚಿ ಶಿವಪ್ಪ.ಹೆಚ್, ಕಂದಾಯ ನೌಕರರ ಸಂಘದ ತಾಲೂಕಾಧ್ಯಕ್ಷ ಶ್ರೀಶೈಲ ಬಿರಾದರ್, ಕಂದಾಯ ನಿರೀಕ್ಷಕರಾದ ಮಂಜುನಾಥ, ಹನುಂತಪ್ಪ, ಹಿರಿಯ ಗ್ರಾಮಾಡಳಿತ ಲೆಕ್ಕಾಧಿಕಾರಿಗಳಾದ ಪರಮೇಶ್ವರ್, ಸುರೇಂದ್ರಕುಮಾರ್, ಶಂಕ್ರಪ್ಪ, ಸಿಪಿಎಮ್ ಮುಖಂಡ ಅಡಿವೆಪ್ಪ ಇನ್ನಿತರ ಅಧಿಕಾರಿಗಳಿದ್ದರು.
ವರದಿ : ಶ್ರೀನಿವಾಸ ನಾಯ್ಕ