ಕಂಪ್ಲಿ: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫಡರೇಷನ್ನ ಕಂಪ್ಲಿ ತಾಲೂಕು ಸಮಿತಿಯಿಂದ 4ನೇ ತಾಲೂಕು ಸಮ್ಮೇಳನವನ್ನು ಜೂನ್ 4, ಬುಧವಾರ ಮಧ್ಯಾಹ್ನ 1 ಗಂಟೆಗೆ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಯಿತು.
ಸಮ್ಮೇಳನದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರು ಜಂಟಿಯಾಗಿ ಮಾತನಾಡಿ, “ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಸ್ಥಾಪಿತವಾದ ಮಂಡಳಿಯ ನಿಧಿ ದುರುಪಯೋಗವಾಗುತ್ತಿರುವುದು ಖಂಡನೀಯ. ಈ ಅನ್ಯಾಯವನ್ನು ತಕ್ಷಣ ನಿಲ್ಲಿಸಬೇಕು. ಕಾರ್ಮಿಕರಿಗೆ ಸರಕಾರ ಘೋಷಿಸಿದ್ದ ಎಲ್ಲಾ ಸೌಲಭ್ಯಗಳ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಬೇಕು,” ಎಂದು ಆಗ್ರಹಿಸಿದರು.

ಈ ಬೇಡಿಕೆಗಳ ಬೆನ್ನಲ್ಲೇ ಕಾರ್ಮಿಕರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ತಮ್ಮ ಮನವಿಯನ್ನು ಕಂಪ್ಲಿ ಪುರಸಭೆಗೆ ಸಲ್ಲಿಸಿದರು. ಮನವಿಯನ್ನು ಸ್ವೀಕರಿಸಿದ ಅಧಿಕಾರಿಗಳು, ಕಾರ್ಮಿಕರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಮ್ಮೇಳನದಲ್ಲಿ ತಾಲೂಕು ಅಧ್ಯಕ್ಷ ಹೊನ್ನುರ್ ಸಾಬ್, ನಾಗರಾಜ್, ಬಸವರಾಜ್ ಸೇರಿದಂತೆ ಅನೇಕ ಕಾರ್ಯಕರ್ತರು ಹಾಗೂ ಕಾರ್ಮಿಕರು ಭಾಗವಹಿಸಿದ್ದು, ಕಾರ್ಮಿಕ ಹಕ್ಕುಗಳ ವಿಚಾರದಲ್ಲಿ ಸಂಘಟಿತ ಹೋರಾಟದ ಅಗತ್ಯತೆಯ ಬಗ್ಗೆ ಪ್ರತಿಪಾದನೆ ನಡೆಯಿತು.




