ಬೆಂಗಳೂರು: ಇದೇ ತಿಂಗಳ 13 ರಿಂದ 15 ರವರೆಗೆ ಮೂರು ದಿನಗಳ ಕಾಲ ರೀಪ್ ಫೌಂಡೇಶನ್ ವತಿಯಿಂದ ಮಹಾರುದ್ರ ಕಿರಾತ ಮೂರ್ತಿ ಮಹಾಯಜ್ಞ ಕಾರ್ಯಕ್ರಮ ಪೀಣ್ಯ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲಗುಂಟೆಯ ಎಂಇಐ ಮೈದಾನದಲ್ಲಿ ನಡೆಯಲಿದೆ ಎಂದು ಶಾಸಕ ಹಾಗೂ ಕಾರ್ಯಕ್ರಮ ಸಮಿತಿ ಅಧ್ಯಕ್ಷರಾದ ಎಸ್. ಮುನಿರಾಜು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮಾಜಿ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ನೂರಾರು ರಾಜಕಾರಣಿಗಳು,ಸಾಧು ಸಂತರು ಮಹಾಯಜ್ಞದಲ್ಲಿ ಭಾಗವಹಿಸಲಿದ್ದಾರೆ.
ರೈತರಿಗೆ,ರಾಷ್ಟ್ರಕ್ಕೆ ,ಸಮಾಜಕ್ಕೆ ಒಳ್ಳೆಯದಾಗಲಿ ಎಂದು ಈ ಮಹಾ ಯಜ್ಞವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಮುನಿರಾಜು ವಿವರಿಸಿದರು.

ಜೂ.13 ರಂದು ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು,14 ರಂದು ಮಹನೀಯ ಗಣ್ಯರು ಯಜ್ಞದಲ್ಲಿ ಪಾಲ್ಗೂಳಲ್ಲಿದ್ದಾರೆ.
ಮಹಾ ಯಜ್ಞದಲ್ಲಿ ವಿಶೇಷತೆ: 15 ರಂದು ಏಕ ವ್ಯಕ್ತಿ, ಉಪವಾಸದಲ್ಲಿ 24,008 ತೆಂಗಿನ ಕಾಯಿಗಳನ್ನು ನಿರಂತರವಾಗಿ ನೀರು ಕುಡಿಯದೆ, ವಿಶ್ರಾಂತಿ ತೆಗೆದುಕೊಳ್ಳದೆ 6 ಗಂಟೆಗಳ ಕಾಲ ಕಾಯಿ ಹೊಡೆಯಲಿದ್ದಾರೆ. ಅದು ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿರುತ್ತದೆ. ನಗರದ ನಾಗರಿಕರು ಈ ಧರ್ಮ ಕಾರ್ಯದಲ್ಲಿ ಭಾಗವಹಿಸಬಹುದು.ತೆಂಗಿನಕಾಯಿ ಹೊಡೆಸುವವರು 101 ರೂ ಕಾಯಿಗೆ ನೀಡಬಹುದು’ ಎಂದು ಶಾಸಕ ಎಸ್.ಮುನಿರಾಜು ತಿಳಿಸಿದರು.
‘ಪಾಂಡವ ಸಂಜಾತ ಅರ್ಜುನನ ಅಹಂಕಾರವನ್ನು ಒಡೆಯಲು ಭಗವಂತ ಶಿವ ಕಿರಾತನ ವೇಷದಲ್ಲಿ ಅರ್ಜುನನೊಂದಿಗೆ ಸೆಣಸಿ ಅವನನ್ನು ಸೋಲಿಸುವ ಮೂಲಕ ಗರ್ವಭಂಗ ಮಾಡಿ ನಂತರ ತನ್ನ ನಿಜರೂಪದಲ್ಲಿ ಅರ್ಜುನನಿಗೆ ಪಾಶುಪತಾಸ್ತ್ರ ನೀಡಿ ಹಾರೈಸುವ ಶಿವನ ಅವತಾರವೇ ಕಿರಾತ ಅವತಾರ ಎಂದು ಪುರಾಣ ಬಗ್ಗೆ ಹೇಳಿದ ರೀಪ್ ಫೌಂಡೇಶನ್ ನ ರಾಷ್ಟ್ರೀಯ ಅಧ್ಯಕ್ಷ ಗೋಪಿನಾಥ್ ವನ್ನೇರಿ,ದೇವರನಾಡು ಕೇರಳದಲ್ಲಿ ಕಿರಾತನ ಮೂರ್ತಿಯನ್ನು ಪೂಜಿಸಲಾಗುತ್ತದೆ.ಮಲಬಾರ್ ಪ್ರಾಂತ್ಯದಲ್ಲಿ ಹೆಚ್ಚಾಗಿ ಪೂಜಿಸಲ್ಪಡುವ ಕಿರಾತ ದೇವರಿಗೆ ಹನ್ನೆರಡು ವರ್ಷಕ್ಕೊಮ್ಮೆ ಆಚರಣೆ ಮಾಡಿ 12 ಸಾವಿರ ತೆಂಗಿನಕಾಯಿ ಹೊಡೆಯುವ ಮೂಲಕ ಪಂದಿರಾಯಿ ಆಚರಿಸಲಾಗುತ್ತದೆ.ನಾವೀಗ ಜೋಡಿ ಪಂದಿರಾಯಿ ಆಚರಿಸುವ ಮೂಲಕ 24 ಸಾವಿರದ 8 ಕಾಯಿಗಳನ್ನು ಹೊಡೆಯಲಾಗುತ್ತದೆ ಎಂದು ತಿಳಿಸಿದರು.
ಅಯ್ಯಪ್ಪ ಸ್ವಾಮಿಯಂತೆಯೇ ಕರ್ನಾಟಕದಲ್ಲಿ ಕಿರಾತ ಸ್ವಾಮಿ ದೇವರನ್ನು ಪ್ರಚುರ ಪಡಿಸುವುದಲ್ಲದೆ ಬೆಂಗಳೂರಿನಲ್ಲಿ ಕಿರಾತನ ಮೂರ್ತಿ ದೇವಾಲಯ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.
ವರದಿ: ಅಯ್ಯಣ್ಣ ಮಾಸ್ಟರ್




