————————————-ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಹುಕ್ಕೇರಿ ಶ್ರೀ
ಬೆಳಗಾವಿ: ಗೋವಾ ರಾಜ್ಯದ ಸುಮಾರು 26 ಕನ್ನಡಪರ ಸಂಘಟನೆಗಳು ಸೇರಿ ಈ ವರ್ಷ 70ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ಮಾಡಿಕೊಂಡಿವೆ.
ಈ ಸಾಂಸ್ಕೃತಿಕ ಸಮ್ಮೇಳನ ನವೆಂಬರ್ 2ರ ಮಧ್ಯಾಹ್ನ 3 ಗಂಟೆಗೆ ಗೋವಾದ ಸಾಂಕ್ವಾಳ ಪಂಚಾಯತ್ ಮೈದಾನದಲ್ಲಿ, ಉಪಾಸನಗರ, ಜುವಾರಿನಗರ, ಸಾಂಕ್ವಾಳ್ ದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಉದ್ಘಾಟಿಸಲಿದ್ದಾರೆ. ವಿಶೇಷವಾಗಿ ಷ.ಬ್ರ. ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಸದ್ಗುರು ಯಲ್ಲಾಲಿಂಗ ಮಠದ ಶ್ರೀ ಕಂಬಳಯ್ಯ ಮಹಾರಾಜರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆ ಶ್ರೀ ಮುರುಳಿ ಮೋಹನ ಶೆಟ್ಟಿ, ಗೌರವಾಧ್ಯಕ್ಷತೆ ಶ್ರೀ ಸಿದ್ದಣ್ಣ ಮೇಟಿ ವಹಿಸಲಿದ್ದಾರೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಗುರುರಾಜ ಹೊಸಕೋಟಿ, ಬಾಬು ಬೂಸಾರಿ ತಂಡ ಮತ್ತು ಮಾತುಗಾರ ಸಿದ್ದಪ್ಪ ಬಿದರಿ ಅವರಿಂದ ಜಾನಪದ ಹಾಗೂ ನಾಡಗೀತೆಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಈ ರಾಜ್ಯೋತ್ಸವವನ್ನು ಆಯೋಜಿಸುತ್ತಿರುವ ಕರ್ನಾಟಕ ರಾಜ್ಯೋತ್ಸವ ಸಮಿತಿ ಗೋವಾ ಅಧ್ಯಕ್ಷರು ಮುರುಳಿ ಮೋಹನ ಶೆಟ್ಟಿ, ಗೌರವಾಧ್ಯಕ್ಷರು ಸಿದ್ದಣ್ಣ ಮೇಟಿ, ಸಂಘಟನಾ ಅಧ್ಯಕ್ಷ ರಾಜಶೇಖರ್ ಶೆಟ್ಟಿ, ಉಪಾಧ್ಯಕ್ಷ ಹನುಮಂತ ಶಿರೂರು ರೆಡ್ಡಿ, ಕಾರ್ಯದರ್ಶಿ ಸುರೇಶ್ ರಜಪೂತ್, ಖಜಾಂಚಿ ಪ್ರಶಾಂತ್ ಜೈನ್ ಹಾಗೂ ಸದಸ್ಯರಾದ ಶಿವಾನಂದ್ ಬಿಂಗೆ, ಮಂಜುನಾಥ್ ನಾಡ್ಕೆ ಮತ್ತು ಅನಿಲ್ ಸನಧಿ ಸೇರಿ ಒಟ್ಟು 26 ಕನ್ನಡ ಸಂಘಟನೆಗಳು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.
ಈ ಬಗ್ಗೆ ಹುಕ್ಕೇರಿ ಶ್ರೀಗಳು ಮಾತನಾಡಿ, ಮೊದಲು ಎಲ್ಲ ಕನ್ನಡಿಗರಿಗೂ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರಿದರು. “ಗೋವಾ ಕರ್ನಾಟಕ ರಾಜ್ಯೋತ್ಸವ ಸಮಿತಿ ಈ ವರ್ಷ ನವೆಂಬರ್ 2ರಂದು ಗೋವಾದಲ್ಲಿ 70ನೇ ರಾಜ್ಯೋತ್ಸವವನ್ನು ಭವ್ಯವಾಗಿ ಆಯೋಜಿಸಿದೆ. ಇದರಲ್ಲಿ ಗೋವಾ ರಾಜ್ಯದ 26 ಕನ್ನಡ ಸಂಘಟನೆಗಳು ಸೇರಿಕೊಂಡು ಕಾರ್ಯಕ್ರಮವನ್ನು ಸಿದ್ಧಪಡಿಸುತ್ತಿರುವುದು ಅತ್ಯಂತ ಸಂತೋಷದ ವಿಚಾರ,” ಎಂದರು.
ಸಮಿತಿಯ ಅಧ್ಯಕ್ಷರು ಮುರುಳಿ ಮೋಹನ ಶೆಟ್ಟಿ, ಗೌರವಾಧ್ಯಕ್ಷರು ಸಿದ್ದಣ್ಣ ಮೇಟಿ, ಸಂಘಟನಾ ಅಧ್ಯಕ್ಷರು ರಾಜಶೇಖರ್ ಶೆಟ್ಟಿ, ಉಪಾಧ್ಯಕ್ಷರು ಹನುಮಂತ ಶಿರೂರು ರೆಡ್ಡಿ, ಕಾರ್ಯದರ್ಶಿ ಸುರೇಶ್ ರಜಪೂತ್, ಖಜಾಂಚಿ ಪ್ರಶಾಂತ್ ಜೈನ್, ಕೋರ್ ಕಮಿಟಿ ಸದಸ್ಯರು ಶಿವಾನಂದ್ ಬಿಂಗೆ, ಉಪಾಧ್ಯಕ್ಷರು ಮಂಜುನಾಥ್ ನಾಡ್ಕೆ, ಹಾಗೂ ಸದಸ್ಯರು ಅನಿಲ್ ಸನಧಿ ಸೇರಿ ಎಲ್ಲರೂ ಸೇರಿ ಕಾರ್ಯಕ್ರಮವನ್ನು ಚೆನ್ನಾಗಿ ಆಯೋಜಿಸಿದ್ದಾರೆ. “ಈ ಎಲ್ಲ ಸಂಘಟನೆಗಳನ್ನೂ ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ,” ಎಂದರು.
“ಗೋವಾದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕು ಎಂಬುದು ನಮ್ಮ ಬಹಳ ವರ್ಷಗಳ ಕನಸು. ಸುಮಾರು 20 ವರ್ಷಗಳಿಂದ ನಾವು ಈ ಕನಸನ್ನು ಕಾಣುತ್ತಿದ್ದೇವೆ. ಈಗ ಆ ಕನಸು ನಿಜವಾಗುತ್ತಿದೆ. ಗಡಿಯ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನ ಮರದ್ ಮತ್ತು ಪ್ರಕಾಶ್ ಮತ್ತಿಹಳ್ಳಿ ಅವರು ಕನ್ನಡ ಭವನಕ್ಕಾಗಿ ನಿವೇಶನ ಖರೀದಿಸಿರುವುದು ಪ್ರಶಂಸನೀಯ ಕಾರ್ಯ,” ಎಂದರು.
“ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಮ್ಮ ಗೋವಾ ಕನ್ನಡಿಗರು ಯಾವಾಗಲೂ ಕರ್ನಾಟಕದ ಸಾಧಕರನ್ನು ಗೌರವಿಸುವ ಸಂಪ್ರದಾಯವನ್ನು ಉಳಿಸಿಕೊಂಡಿದ್ದಾರೆ. ಈ ವರ್ಷ ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಜನಪರ ಸೇವೆ ಮಾಡಿದಕ್ಕಾಗಿ ಅವರನ್ನು ವಿಶೇಷವಾಗಿ ಗೌರವಿಸಲಾಗುತ್ತದೆ. ಈ ಎಲ್ಲ ಕಾರ್ಯಕ್ರಮಗಳು ನವೆಂಬರ್ 2ರಂದು ನಡೆಯುತ್ತವೆ. ಎಲ್ಲರೂ ಬಂದು ರಾಜ್ಯೋತ್ಸವವನ್ನು ಯಶಸ್ವಿಗೊಳಿಸಬೇಕು,” ಎಂದು ಮನವಿ ಮಾಡಿದರು.
“ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಆಗಬೇಕೆಂಬ ಕನಸು ಇತ್ತಿಚೆಗೆ ನನಸಾಗುತ್ತಿದೆ. ಇದು ಎಲ್ಲ ಗೋವಾ ಕನ್ನಡಿಗರ ಹೆಮ್ಮೆಯ ಕ್ಷಣ. ಎಲ್ಲರೂ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಬೇಕು,” ಎಂದು ಕರೆ ನೀಡಿದರು.
ವರದಿ: ಶಿವಾಜಿ ಎನ್ ಬಾಲೇಶಗೋಳ




