ಚೇಳೂರು : ಪಟ್ಟಣದಲ್ಲಿ ರಸ್ತೆ ಅಪಘಾತಗಳನ್ನು ತಡೆಯುವ ದೃಷ್ಟಿಯಿಂದ ಮತ್ತು ಸಂಚಾರ ನಿಯಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ, ಮಂಗಳವಾರ (ಡಿಸೆಂಬರ್ 9, 2025) ಬೆಳಗ್ಗೆ ಪಿಎಸ್ಐ ಹರೀಶ್ ಅವರ ನೇತೃತ್ವದಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದರು.
ಈ ಕಾರ್ಯಾಚರಣೆಯ ವೇಳೆ, ಹೆಲ್ಮೆಟ್ ಧರಿಸದೆ ಹಾಗೂ ಸೂಕ್ತ ವಿಮಾ ದಾಖಲೆಗಳಿಲ್ಲದೆ ಸಂಚರಿಸುತ್ತಿದ್ದ ಹಲವಾರು ದ್ವಿಚಕ್ರ ವಾಹನ ಸವಾರರನ್ನು ತಡೆದು ನಿಲ್ಲಿಸಿ, ಅವರ ವಾಹನಗಳನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆಯಲಾಯಿತು.
ಪಿಎಸ್ಐ ಹರೀಶ್ ಅವರು ಸ್ಥಳದಲ್ಲಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಸರ್ಕಾರದ ಆದೇಶದಂತೆ ಡಿಸೆಂಬರ್ 12 ರಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಿದೆ ಎಂದು ತಿಳಿಸಿದರು. ಅಲ್ಲದೆ, ವಿಮೆ ಇಲ್ಲದ ವಾಹನಗಳ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಪಿಎಸ್ಐ ಅವರ ಸೂಚನೆಯ ಮೇರೆಗೆ, ವಶಪಡಿಸಿಕೊಂಡಿದ್ದ ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರರು ತಕ್ಷಣವೇ ಹೆಲ್ಮೆಟ್ಗಳನ್ನು ಖರೀದಿಸಿ ತಂದು, ಪೊಲೀಸರಿಗೆ ತೋರಿಸಿ ತಮ್ಮ ವಾಹನಗಳನ್ನು ಹಿಂಪಡೆದರು.
ಈ ಜಾಗೃತಿ ಕಾರ್ಯಾಚರಣೆಯಲ್ಲಿ ಎಎಸ್ಐ ಮಂಜುನಾಥ, ಕ್ರೈಮ್ ಪಿಸಿಗಳಾದ ಬೀರಣ್ಣ, ಚಂದ್ರಕಾಂತ್, ಹೆಡ್ ಕಾನ್ಸ್ಟೇಬಲ್ಗಳಾದ ಸುಧಾಕರ್, ಪ್ರಭಾಕರ್ ಸೇರಿದಂತೆ ಪೊಲೀಸ್ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಸೋಮವಾರ ಮತ್ತು ಮಂಗಳವಾರ ನಾವು ದಂಡ ವಿಧಿಸದೇ ಕೇವಲ ಜಾಗೃತಿ ಮೂಡಿಸಿದ್ದೇವೆ. ಡಿಸೆಂಬರ್ 12 ರಿಂದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಪ್ರತಿಯೊಬ್ಬ ಸವಾರರು ತಮ್ಮ ಮತ್ತು ತಮ್ಮ ಕುಟುಂಬದವರ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸುವುದು ಹಾಗೂ ವಾಹನ ವಿಮೆಯನ್ನು ಮಾಡಿಸಿಕೊಳ್ಳುವುದು ಅತ್ಯಗತ್ಯ. ನಿಯಮ ಉಲ್ಲಂಘಿಸುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
– ಹರೀಶ್ ಪಿಎಸ್ಐ ಚೇಳೂರು.
ಮಂಗಳವಾರ ನಡೆದ ಕಾರ್ಯಾಚರಣೆಯಲ್ಲಿ ದಂಡ ಹಾಕದೆ ಕೇವಲ ಎಚ್ಚರಿಕೆ ನೀಡಿರುವುದು ಸಕಾರಾತ್ಮಕ ಬೆಳವಣಿಗೆ. ಪೊಲೀಸರ ಈ ಕ್ರಮ ನಮ್ಮ ಸುರಕ್ಷತೆಯ ದೃಷ್ಟಿಯಿಂದಲೇ ಇದೆ. ಇಂದಿನಿಂದ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸಂಚರಿಸುತ್ತೇವೆ.
– ಎಸ್ ರಾಮಾಂಜನೇಯ ಚೇಳೂರು.
ವರದಿ :ಯಾರಬ್. ಎಂ




