ಗದಗ: ಲಂಚ ಪಡೆದ ಆರೋಪದಡಿ ಇಂದು ಲೋಕಾಯುಕ್ತ ಬಲೆಗೆ ಬಿದ್ದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಅವರನ್ನು ಲೋಕಾಯುಕ್ತ ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ.
ರೆಡ್ ಹ್ಯಾಂಡ್ ಆಗಿ ಲಮಾಣಿ ತಮ್ಮ ಆಸ್ಪತ್ರೆಯಲ್ಲೇ ಗುತ್ತಿಗೆದಾರ ವಿಜಯ್ ಪೂಜಾರ್ ಎಂಬುವವರಿಂದ ಐದು ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು.
ಈ ವೇಳೆ ಚಂದ್ರು ಲಮಾಣಿ ಮತ್ತವರ ಖಾಸಗಿ ಪಿಎ ಸೇರಿದಂತೆ ಸರ್ಕಾರಿ ಆಪ್ತ ಸಹಾಯಕನನ್ನು ವಶಕ್ಕೆ ಪಡೆಯಲಾಗಿತ್ತು.
ಇದೀಗ ಬಂಧನವಾಗಿದ್ದು, ಕೆಲವೇ ಕ್ಷಣಗಳಲ್ಲಿ ಗದಗ ಲೋಕಾಯುಕ್ತ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಮುಂದಿನ ವಿಚಾರಣೆಗಾಗಿ ಆರೋಪಿತರನ್ನು ಲೋಕಾಯುಕ್ತ ಪೊಲೀಸರು ಕಷ್ಟಡಿಗೆ ಕೇಳುವ ನಿರೀಕ್ಷೆ ಇದೆ.
ಕಮಿಷನ್ಗೆ ಬೇಡಿಕೆ ಇಟ್ಟಿದ್ದ ಶಾಸಕ!
ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ಐದು ಲಕ್ಷ ರೂಪಾಯಿಯನ್ನು ಗುತ್ತಿಗೆದಾರ ವಿಜಯ್ ಎಂಬುವವರಿಂದ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲಾಕ್ ಆಗಿದ್ದಾರೆ.
ರಸ್ತೆಯೊಂದರ ತಡೆಗೋಡೆ ನಿರ್ಮಾಣದ ಕಾಮಗಾರಿಗಾಗಿ ಚಂದ್ರು ಲಮಾಣಿ 11 ಲಕ್ಷ ರೂಪಾಯಿ ಕಮಿಷನ್ಗೆ ಬೇಡಿಕೆ ಇಟ್ಟಿದ್ದರಂತೆ. ಮುಂಗಡವಾಗಿ ಐದು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗಲೇ ಲೋಕಾ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇದೀಗ ಅವರ ಬಂಧನವಾಗಿದೆ.
ಲಕ್ಷ್ಮೇಶ್ವರ ಪಟ್ಟಣದಲ್ಲಿ ಚಂದ್ರು ಲಮಾಣಿಗೆ ಸೇರಿದ ಬಾಲಾಜಿ ಆಸ್ಪತ್ರೆಯಲ್ಲಿ ಗುತ್ತಿಗೆದಾರ ವಿಜಯ್ ಪೂಜಾರ ಎಂಬುವರಿಂದ ಹಣ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಅವರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಹಾಗೂ ಕಮಿಷನ್ ದಂಧೆಯಲ್ಲಿ ಸರ್ಕಾರ ತೊಡಗಿದೆ ಎಂದು ಗಂಭೀರವಾಗಿ ಅಸ್ತ್ರವಾಗಿಸಿಕೊಂಡು ಆರೋಪಿಸುತ್ತಿರುವ ರಾಜ್ಯ ಬಿಜೆಪಿ ನಾಯಕರಿಗೆ ಇದೀಗ ಚಂದ್ರು ಲಮಾಣಿಯ ಈ ಪ್ರಕರಣದಿಂದ ತೀವ್ರ ಮುಜುಗರವುಂಟು ಮಾಡಿದಂತಿದೆ.




