ಬೆಂಗಳೂರು : ಇಷ್ಟಪಟ್ಟ ಹುಡುಗನ ಜೊತೆ ಇನ್ನೇನು ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಯುವತಿಯೊಬ್ಬರು ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆತಂಕಕಾರಿ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಎಂಇಐ ಲೇಔಟ್ನಲ್ಲಿ ನಡೆದಿದೆ.
ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಹಾಗೂ ಮನೆಯಿಂದಲೇ ಕೆಲಸ (Work from Home) ಮಾಡುತ್ತಿದ್ದ ವಿದ್ಯಾಜ್ಯೋತಿ (29) ಮೃತಪಟ್ಟ ದುರ್ದೈವಿ.
ಮೃತ ವಿದ್ಯಾಜ್ಯೋತಿ ಕೊಡಗು ಮೂಲದ ಯುವಕನನ್ನ ಪ್ರೀತಿಸುತ್ತಿದ್ದಳು. ಆಕೆಯ ಇಷ್ಟದಂತೆ ಎರಡೂ ಕಡೆಯ ಕುಟುಂಬದವರು ಒಪ್ಪಿ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ, ಇತ್ತೀಚೆಗೆ ಜ್ಯೋತಿಷಿಯೊಬ್ಬರು ವಿದ್ಯಾಜ್ಯೋತಿಗೆ “ನೀನು ಅಲ್ಪಾಯುಷಿ” (ಕಡಿಮೆ ಆಯಸ್ಸು ಹೊಂದಿರುವವಳು) ಎಂದು ಭವಿಷ್ಯ ನುಡಿದಿದ್ದರು ಎನ್ನಲಾಗಿದೆ. ಇದೇ ವಿಚಾರಕ್ಕೆ ನೊಂದು, ಹೆದರಿದ ಆಕೆ ಈ ಕಠಿಣ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ.
ದೇವರಿಗೆ ತಾಳಿ ಒಪ್ಪಿಸುವ ದಿನವೇ ದುರಂತ: ವಿದ್ಯಾಜ್ಯೋತಿ ಅಲ್ಪಾಯುಷಿ ಎಂದು ಹೇಳಿದ್ದ ಜ್ಯೋತಿಷಿ, ದೋಷ ಪರಿಹಾರಕ್ಕಾಗಿ 9 ದಿನಗಳ ಕಾಲ ಪೂಜೆ ಮಾಡುವಂತೆ ತಾಕೀತು ಮಾಡಿದ್ದರು. ಜೊತೆಗೆ 9ನೇ ದಿನ ಮಾರಮ್ಮ ದೇವರಿಗೆ ತಾಳಿ ಒಪ್ಪಿಸುವಂತೆ ತಿಳಿಸಿದ್ದರು. ಇದರಂತೆ ಕುಟುಂಬಸ್ಥರು ದೇವರಿಗೆ ತಾಳಿ ಕೊಡಲು ಸಿದ್ಧತೆ ನಡೆಸಿದ್ದರು.
ಮಧ್ಯಾಹ್ನದ ಊಟದ ನಂತರ ವಿದ್ಯಾಜ್ಯೋತಿ ತನ್ನ ರೂಮ್ಗೆ ಹೋಗಿದ್ದಳು. ಆಕೆ ಮನೆಯಿಂದಲೇ ಕೆಲಸ ಮಾಡುತ್ತಿದ್ದ ಕಾರಣ, ಕೆಲಸ ಮಾಡುತ್ತಿರಬಹುದೆಂದು ಮನೆಯವರು ಭಾವಿಸಿದ್ದರು.
ಆದರೆ ಸಂಜೆ ತಾಯಿ ಕರೆದರೂ ಆಕೆ ಹೊರಬಂದಿರಲಿಲ್ಲ. ರಾತ್ರಿ 8 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಹೋಗಬೇಕಿದ್ದ ಕಾರಣ ತಾಯಿ ಮತ್ತೆ ಮಗಳನ್ನು ಕರೆದಿದ್ದಾರೆ.
ಎಷ್ಟು ಬಾಗಿಲು ತಟ್ಟಿದರೂ ತೆಗೆಯದಿದ್ದಾಗ, ಅನುಮಾನಗೊಂಡು ಕಿಟಕಿಯ ಮೂಲಕ ನೋಡಿದ್ದಾರೆ. ಈ ವೇಳೆ ಆಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಘಟನೆ ಕುರಿತು ಮಾಹಿತಿ ತಿಳಿದ ಕೂಡಲೇ ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.




