ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ‘ಗೃಹಲಕ್ಷ್ಮಿ’ ಯೋಜನೆಯಡಿ ಪ್ರತಿ ತಿಂಗಳು ಬರುತ್ತಿದ್ದ 2,000 ರೂಪಾಯಿಗಳನ್ನು ಉಳಿತಾಯ ಮಾಡುವ ಮೂಲಕ ಮಹಿಳೆಯೊಬ್ಬರು ಸ್ವಂತ ಐಸ್ಕ್ರೀಮ್ ಅಂಗಡಿ ತೆರೆದು ಮಹಿಳಾ ಸಬಲೀಕರಣಕ್ಕೆ ಮಾದರಿಯಾಗಿದ್ದಾರೆ.
ಪ್ರತಿ ತಿಂಗಳು ತಮಗೆ ಸಿಗುತ್ತಿದ್ದ ಹಣವನ್ನು ಅನಗತ್ಯ ಖರ್ಚು ಮಾಡದೆ, ಹನಿ ಹನಿ ಕೂಡಿದರೆ ಹಳ್ಳ ಎಂಬಂತೆ ಸಂಗ್ರಹಿಸಿ ಇಂದು ಉದ್ಯಮಿಯಗಿ ಬೆಳೆದು ನಿಂತಿದ್ದಾರೆ. ಇವರ ಈ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಹರಾಳು ಗ್ರಾಮದ ಎನ್.ವಿಶಾಲಾಕ್ಷಿ ಐಸ್ಕ್ರೀಮ್ ಅಂಗಡಿ ತೆರೆದು, ಸ್ವಾವಲಂಬಿ ಬದುಕು ಕಟ್ಟಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಧ್ಯಮ ವರ್ಗದ ಕುಟುಂಬದ ವಿಶಾಲಾಕ್ಷಿ ನಿತ್ಯ ಕೂಲಿ ಕೆಲಸ ಮಾಡುತ್ತಿದ್ದರು. ಆದರೆ, ಪ್ರತಿ ತಿಂಗಳು 2,000 ರೂ.ನಂತೆ ಬರುವ ಗೃಹಲಕ್ಷ್ಮೀ ಹಣ ಕೂಡಿಟ್ಟು ಐಸ್ಕ್ರೀಂ ಅಂಗಡಿ ಓಪನ್ ಮಾಡಿದ್ದಾರೆ.
ಕೊಟ್ಟೂರಿನ ಕಿಶನ್ ಎಂಟರ್ಪ್ರೈಸ್ ವಿತರಕರಿಂದ ಚಾಕೋಬಾರ್, ಐಸ್ ಕ್ಯಾಂಡಿ, ಕುಲ್ಫಿ ಐಸ್, ಕೋನ್ ಐಸ್, ಕಪ್ ಐಸ್ ಇನ್ನಿತರೆ ಎಲ್ಲಾ ತರಹದ ಐಸ್ಕ್ರೀಮ್ ಉತ್ಪನ್ನಗಳನ್ನು ನೇರವಾಗಿ ಪಡೆದು ಮಾರಾಟ ಮಾಡುತ್ತಿದ್ದಾರೆ. ಹೊಸದಾಗಿ ಅಂಗಡಿ ಆರಂಭಿಸಿರುವ ವಿಶಾಲಾಕ್ಷಿಯ ಅಂಗಡಿಗೆ ಗ್ರಾಹಕರು ಲಗ್ಗೆ ಇಟ್ಟು ಐಸ್ಕ್ರೀಂ ಖರೀದಿ ಮಾಡ್ತಿದ್ದಾರೆ.
ಇದುವರೆಗೂ ಬಿಡುಗಡೆಯಾದ ಕಂತುಗಳ ಹಣವನ್ನು ಬ್ಯಾಂಕ್ ಖಾತೆಯಲ್ಲೇ ಉಳಿಸಿದ್ದ ವಿಶಾಲಾಕ್ಷಿ ಅವರು ತಮ್ಮ ಪತಿ ಎನ್.ಬಸವರಾಜ ಅವರ ಸಹಕಾರದೊಂದಿಗೆ ಈ ಉದ್ಯಮವನ್ನು ಆರಂಭಿಸಿರುವುದಾಗಿ ಹೇಳಿಕೊಂಡಿದ್ದಾರೆ. ಉಚಿತ ಭಾಗ್ಯವು ನಮ್ಮ ಬದುಕಿಗೆ ವರದಾನವಾಗಿದೆ. ಯೋಜನೆ ಜಾರಿಗೆ ತಂದವರ ಹೊಟ್ಟೆ ನೂರಾರು ಕಾಲ ತಣ್ಣಗಿರಲಿ ಎಂದ ಕೃತಜ್ಞತೆ ಸಲ್ಲಿ ಸಿದ್ದಾರೆ.




