ಬೆಳಗಾವಿ : ಸದಾ ಸೀರೆಯನ್ನೇ ಧರಿಸಬೇಕು ಎಂಬ ಪತಿಯ ಹಠಕ್ಕೆ ಬಲಿಯಾದ ಪತ್ನಿಯೊಬ್ಬಳು ಈಗ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಮನೆಯಲ್ಲಿ ಸೀರೆ ಬದಲಿಗೆ ನೈಟಿ ಧರಿಸಿದ್ದಕ್ಕೆ ಆಕ್ರೋಶಗೊಂಡ ಪತಿ ಪತ್ನಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ ಭಯಾನಕ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಕೃಷ್ಣಾಜಿ ಪಾಟೀಲ್ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿ. ಈತನ ಪತ್ನಿ ಮಂಜುಳಾ ಪಾಟೀಲ್ (32) ಗಂಭೀರವಾಗಿ ಗಾಯಗೊಂಡವರು. ಕೃಷ್ಣಾಜಿ ತನ್ನ ಪತ್ನಿ ಮನೆಯಲ್ಲಿ ನೈಟಿ ಧರಿಸುವುದನ್ನು ವಿರೋಧಿಸುತ್ತಿದ್ದನು. ಈ ವಿಚಾರವಾಗಿ ದಂಪತಿಗಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ನಡೆದಿದ್ದೇನು? ಏಪ್ರಿಲ್ 19 ರಂದು ರಾತ್ರಿ ಇದೇ ವಿಚಾರಕ್ಕೆ ದಂಪತಿಗಳ ನಡುವೆ ತೀವ್ರ ಜಗಳ ನಡೆದಿದೆ. ಮಂಜುಳಾ ನೈಟಿ ಧರಿಸಿದ್ದರಿಂದ ಆಕ್ರೋಶಗೊಂಡ ಕೃಷ್ಣಾಜಿ, ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಮಂಜುಳಾ ಅವರ ಕಿರುಚಾಟ ಕೇಳಿ ಓಡಿ ಬಂದ ಸ್ಥಳೀಯರು ಬೆಂಕಿ ನಂದಿಸಿ ಅವರನ್ನು ರಕ್ಷಿಸಿದ್ದಾರೆ.
ಘಟನೆಯಲ್ಲಿ ಮಂಜುಳಾ ಅವರಿಗೆ ಸುಮಾರು ಶೇ. 80 ರಷ್ಟು ಸುಟ್ಟ ಗಾಯಗಳಾಗಿದ್ದು, ಮೊದಲು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಪರಿಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಗೋವಾದ ಆಸ್ಪತ್ರೆಗೆ ರವಾನಿಸಲಾಗಿದೆ.ಈ ಸಂಬಂಧ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಕೃಷ್ಣಾಜಿ ಪಾಟೀಲ್ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.




