ಸಿರುಗುಪ್ಪ : ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಡ ಶಾಲೆ ವಿಭಾಗದ ಆವರಣದಲ್ಲಿ 2004-05ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳಿಂದ ನಡೆದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕರಾದ ನಾಗೇಂದ್ರಪ್ಪ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಎಲ್ಲಾ ಗುರುವೃಂದವು ಕಾರ್ಯಕ್ರಮದ ಮೂಲಕ ಅಂದಿನ ಸವಿನೆನಪುಗಳನ್ನು ಮರುಕಳಿಸುವ ಮೂಲಕ ಗುರು ವಂದನೆಯನ್ನು ಹಮ್ಮಿಕೊಂಡಿರುವುದು ನಮ್ಮೆಲ್ಲರ ಸುದಿನವೆಂದು ಹೇಳಬಹುದಾಗಿದೆ.ನಮ್ಮಿಂದ ಶಿಕ್ಷಣವನ್ನು ಪಡೆದು ಉನ್ನತ ಸ್ಥಾನಗಳನ್ನು ಪಡೆದಿರುವ ನೀವೆಲ್ಲಾ ನಾವು ಹೆಮ್ಮೆ ಪಡುವಂತೆ ಮಾಡಿದ್ದೀರಿ.
ಇದೇ ರೀತಿ ಮುಂದಿನ ಜೀವನವು ಸಹ ಉತ್ತಮವಾಗಿರಲೆಂದು ಹಾರೈಸಿದರು. ಅಲ್ಲದೇ ಕಾರ್ಯಕ್ರಮದ ವ್ಯವಸ್ಥೆಗೆ ಶ್ರಮಿಸಿದ ಬಸವರಾಜ, ಗಣೇಶ, ಹುಲೇಶ, ಸ್ವಾಮಿ ಅವರ ಶ್ರಮವನ್ನು ನೆನಪಿಸಲಾಯಿತು. ಪ್ರಸ್ತುತ ಪಿ.ಎಸ್.ಐ ಆಗಿ ಕಾರ್ಯನಿರ್ವಹಿಸುತ್ತಿರುವ ಶಾಂತಮೂರ್ತಿ ಅವರು ಮಾತನಾಡಿ ನಮ್ಮೆಲ್ಲರ ಗುರುಗಳು ಹಾಕಿಕೊಟ್ಟ ಮಾರ್ಗದಿಂದಾಗಿ ಉನ್ನತ ಸ್ಥಾನವನ್ನು ಅಲಂಕರಿಸಲು ಸಾಧ್ಯವಾಗಿದೆ.
ಇಂದಿನ ಪೈಪೋಟಿ ಹಾಗೂ ಒತ್ತಡದ ಕಾರ್ಯಗಳ ಮದ್ಯೆ ಇಂತಹ ಕಾರ್ಯಕ್ರಮಗಳ ಮೂಲಕ ತರಗತಿಯ ಎಲ್ಲಾ ಸ್ನೇಹಿತರನ್ನು ನೋಡುವ ಭಾಗ್ಯವು ದೊರೆತ್ತಿರುವುದು ನಮ್ಮೆಲ್ಲರ ಅದೃಷ್ಟವಾಗಿದೆ.ಮುಂದೆಯು ನಾವೆಲ್ಲ ಇಂತಹ ಉತ್ತಮ ನಡೆ ನುಡಿಗಳನ್ನು ಮುಂದುವರೆಸಿಕೊಂಡು ಹೋಗೋಣವೆಂದು ಸ್ನೇಹ ಬಳಗಕ್ಕೆ ತಿಳಿಸಿದರು.ಇದೇ ವೇಳೆ ಶಿಕ್ಷಕರಾದ ನಾಗೇಂದ್ರಪ್ಪ, ಈರಣ್ಣ, ಹರಿನಾಥ ಬಾಬು.ವಿ, ರಮೇಶ, ದೇವೇಂದ್ರಪ್ಪ, ಕಲ್ಲಪ್ಪ, ಸುರೇಶ, ಅಪರ್ಣ ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಿ ಗುರು ವಂದನೆ ಸಲ್ಲಿಸಲಾಯಿತು.
ವರದಿ : ಶ್ರೀನಿವಾಸ ನಾಯ್ಕ