ತುರುವೇಕೆರೆ: ಸರ್ಕಾರಿ ವಾಹನ ದುರ್ಬಳಕೆ ಕುರಿತು ಪ್ರಶ್ನಿಸಿದ್ದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (ಕೆ.ಆರ್.ಎಸ್.) ಕಾರ್ಯಕರ್ತನ ಮೇಲೆ ಗೂಂಡಾಗಳನ್ನು ಕಳಿಸಿ ಹಲ್ಲೆ ಮಾಡಿಸಿದ್ದಾರೆಂದು ಆರೋಪಿಸಿ ತುರುವೇಕೆರೆ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ(ಇಒ) ಶಿವರಾಜಯ್ಯ ವಿರುದ್ದ ಕೆ.ಆರ್.ಎಸ್. ಪಕ್ಷದ ಕಾರ್ಯಕರ್ತರು ಇಒ ಕಛೇರಿ ಎದುರು ಪ್ರತಿಭಟನೆ ನಡೆಸಿದರು. ಇದಲ್ಲದೆ ತಾಪಂ ಇಒ ಕುರ್ಚಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಹಾರ ಹಾಕುವ ಮೂಲಕ ಸನ್ಮಾನಿಸಿದ ಕಾರ್ಯಕರ್ತರು, ಇಒಗೆ ಜೈಕಾರ ಕೂಗುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಕ್ಷದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿ ಮಾತನಾಡಿ, ಇಒ ಶಿವರಾಜಯ್ಯ ಸರ್ಕಾರಿ ವಾಹನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಅಧಿಕಾರಿಗಳನ್ನು ಶಾಸಕರು, ಜನಪ್ರತಿನಿಧಿಗಳು, ಮೇಲಾಧಿಕಾರಿಗಳು ಪ್ರಶ್ನಿಸದಿರುವುದು, ಇವರ ಮೇಲೆ ಕ್ರಮ ಕೈಗೊಳ್ಳದಿರುವುದು ಶೋಚನೀಯ ಸಂಗತಿಯಾಗಿದೆ. ಸರ್ಕಾರಿ ವಾಹನ ದುರ್ಬಳಕೆ ಮಾಡಿಕೊಂಡಿರುವುದನ್ನು ಪ್ರಶ್ನಿಸಿದ ಕೆ.ಆರ್.ಎಸ್. ಪಕ್ಷದ ಕಾರ್ಯಕರ್ತ ತುರುವೇಕೆರೆ ತಾಲೂಕಿನ ತುಯಲಹಳ್ಳಿಯ ತಿಮ್ಮಪ್ಪನವರ ಮೇಲೆ ಗೂಂಡಾಗಳನ್ನು ಬಿಟ್ಟು ಹಲ್ಲೆ ಮಾಡಿಸಿದ್ದಾರೆ. ಇಂತಹ ಅಧಿಕಾರಿಗಳು ಸಮಾಜದಲ್ಲಿ ಸಾರ್ವಜನಿಕ ಸೇವೆಯಲ್ಲಿ ಇರುವುದಕ್ಕೆ ನಾಲಾಯಕ್ ಎಂದ ಅವರು, ಇಒ ಶಿವರಾಜಯ್ಯ ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಇಒ ಕಛೇರಿವರೆಗೆ ಮೆರವಣಿಗೆ ಮೂಲಕ ಇಒಗೆ ಜೈಕಾರ ಕೂಗುತ್ತಾ ಇಒ ಕಛೇರಿ ಆವರಣಕ್ಕೆ ಬಂದ ಕೆ.ಆರ್.ಎಸ್. ಕಾರ್ಯಕರ್ತರು ಇಒ ಕೊಠಡಿ ಎದುರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಜೀವನ್, ರಘುನಂದನ್, ಎಸ್ಸಿ.ಎಸ್ಟಿ ರಾಜ್ಯ ಕಾರ್ಯದರ್ಶಿ ಚನ್ನಯ್ಯ, ನರಸಿಂಹರಾಜು, ಹಲ್ಲೆಗೊಳಗಾದ ತಿಮ್ಮಪ್ಪನವರ ತಾಯಿ ಲಕ್ಕಮ್ಮ, ಅಜ್ಜಿ ಅಟ್ಟಮ್ಮ, ಜಿಲ್ಲಾಧ್ಯಕ್ಷ ಶ್ರೀನಿವಾಸ್ ಮೂರ್ತಿ, ಜಿಲ್ಲಾ ಉಪಾಧ್ಯಕ್ಷ ಪ್ರದೀಪ್ ಕುಮಾರ್, ಮಂಡ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಕಿಲಾರ, ತಾಲೂಕು ಕಾರ್ಯಕರ್ತರಾದ ತಿಮ್ಮಪ್ಪ, ಗಂಗಾಧರಯ್ಯ, ಅರುಣ್ ಕುಮಾರ್, ಚಿದಾನಂದಮೂರ್ತಿ, ಪವಿತ್ರ ಸೇರಿದಂತೆ ಮುಂತಾದವರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ