ಐನಾಪುರ:ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಪ್ರಥಮ ಹಂತದ ಎರಡು ಮೋಟಾರಗಳಿಗೆ ಚಾಲನೆ ನೀಡುವುದರಿಂದ ಸುಮಾರು 15 ಸಾವೀರ ಹೆಕ್ಟೇರ್ ಅಥವಾ 40 ಸಾವೀರ ಎಕರೆ ಭೂಮಿ ನೀರಾವರಿಗೊಳಪಡಲಿದೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ಅವರು ಗುರು ವಾರ ಐನಾಪುರದಲ್ಲಿರುವ ಕೃಷ್ಣಾನದಿಯ ಬಸವೇಶ್ವರ ಏತ ನೀರಾವರಿ ಯೋಜನೆಯ ಕಾಲುವೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ನಂತರ ಬೃಹತ್ ಜಾಕಲವೆಲ್ಲನಲ್ಲಿರುವ ಮೋಟಾರುಗಳನ್ನು ಬಟನ್ ಒತ್ತುವ ಮೂಲಕ ಚಾಲನೆ ನೀಡಿ ಮಾತನಾಡುತ್ತಿದ್ದರು.
ಒಟ್ಟು 1300 ಕೋಟಿ ವೆಚ್ಚದ ಈ ಯೋಜನೆಗೆ ಈಗಾಗಲೇ ಸುಮಾರು 1200 ಕೋಟಿ ಹಣ ಬಿಡುಗಡೆಯಾಗಿದ್ದು, ಇನ್ನೂ 100 ರಿಂದ 200 ಕೋಟಿ ರೂ.ಹಣ ಬಿಡುಗಡೆಯಾಗಬೇಕು ಆಗ ಮಾತ್ರ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದ ಅವರು ಈ ಯೋಜನೆ ಪೂರ್ಣಗೊಂಡ ನಂತರ ಅತ್ಯಂತ ಬರಗಾಲ ಪೀಡಿತ ಸುಮಾರು 25 ರಿಂದ 30 ಗ್ರಾಮಗಳ 27460 ಹೆಕ್ಟೇರ ಅಥವಾ 65 ರಿಂದ 70 ಸಾವೀರ ಎಕರೆ ಭೂಮಿ ನೀರಾವರಿಗೊಳಪಡಲಿದೆ ಎಂದು ಹೇಳಿದರು.
ಈ ಯೋಜನೆಗೆ 2017 ರಲ್ಲಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಈಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಯೋಜನೆ ಈಗಾಗಲೇ ಮುಕ್ತಾಯಗೊಳ್ಳಬೇಕಿತ್ತು ಆದರೆ ಅನುದಾನ ಬಿಡುಗಡೆಯಲ್ಲಿ ವಿಳಂಬ, ಗುತ್ತಿಗೆದಾರರಿಂದ ಅಡತಡೆ ಸೇರಿದಂತೆ ಅನೇಕ ಅಡಚಣೆಗಳು ಬಂದ ಪರಿಣಾಮ ಈ ಯೋಜನೆ ಅನುಷ್ಠಾನಕ್ಕೆ ವಿಳಂಬವಾಗಿದೆ ಎಂದ ಅವರು ಕೆಲವೇ ತಿಂಗಳಲ್ಲಿಯೇ ಈ ಯೋಜನೆಗೆ ಬೇಕಾಗುವ ಅನುದಾನ ಬಿಡುಗಡೆಯಾಗಿ ಯೋಜನೆ ಪೂರ್ಣಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ನೀರಾವರಿ ನಿಗಮದ ಸಿ.ಇ ನಾಗರಾಜ ಬಿ.ಎ, ಕಾ.ಇ. ಪ್ರವೀಣ ಹುಣಸಿಕಟ್ಟಿ, ಸ.ಕಾ.ಇ ಪ್ರಶಾಂತ ಪೊತದಾರ, ಸಹಾಯಕ ಅಭಿಯಂತರ ಬಸವರಾಜ ಗಲಗಲಿ, ಗಾಯತ್ರಿ ಕನ್ಸಟ್ರಕ್ಷನ್ಸನ ಎಸ್.ಜೆ.ಎಮ್. ಎಮ್.ವ್ಹಿ.ಶೇಖರ, ಜಿ.ಎಮ್. ನಾಗೇಶ ಕೆ. ಧುರೀಣರಾದ ಘೂಳಪ್ಪ ಜತ್ತಿ, ದಿಗ್ವಿಜಯ ಪವಾರ ದೇಸಾಯಿ, ಶಿವಾನಂದ ಗೊಲಭಾವಿ, ಅಶೋಕ ಕೌಲಗುಡ್ಡ, ಕುಮಾರ ಪಾಟೀಲ, ಅರುಣ ಗಾಣಿಗೇರ, ಪ್ರಕಾಶ ಕೊರಬು, ವಿಶ್ವನಾಥ ನಾಮದಾರ, ಅರವಿಂದ ಕಾರ್ಚಿ, ಚಂದ್ರಕಾಂತ ಇಮ್ಮಡಿ ಸೇರಿದಂತೆ ಇತರರು ಇದ್ದರು.