ತುರುವೇಕೆರೆ: ತಾಲೂಕಿನ ಚಿಮ್ಮನಹಳ್ಳಿ ಗ್ರಾಮದ ಶ್ರೀ ಮುನೇಶ್ವರ ಸ್ವಾಮಿ ದಾಸೋಹ ಮಠದ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಹೆಣ್ಣು ಚಿರತೆಯೊಂದು ಸಿಕ್ಕಿ ಬಿದ್ದಿದೆ.
ಕಳೆದೊಂದು ವಾರದಿಂದ ಕೊಂಡಜ್ಜಿ, ಚಿಮ್ಮನಹಳ್ಳಿ, ದೊಡ್ಡಗೋರಾಘಟ್ಟ ಭಾಗದಲ್ಲಿ ಮೂರು ನಾಲ್ಕು ಚಿರತೆಗಳು ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಚಿಮ್ಮನಹಳ್ಳಿ ಮುನೇಶ್ವರ ದೇವಸ್ಥಾನದ ಹಿಂಭಾಗದ ಅರಣ್ಯ ಪ್ರದೇಶದಲ್ಲಿ ಚಿರತೆ ಓಡಾಡುತ್ತಿರುವುದು ದೇವಾಲಯದ ಸಿಸಿ ಕ್ಯಾಮೆರಾದಿಂದ ಪತ್ತೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಮೂಲತಃ ಚಿಮ್ಮನಹಳ್ಳಿ ಗ್ರಾಮದವರಾದ ತಂಡಗ ಆರೋಗ್ಯ ವೈದ್ಯಾಧಿಕಾರಿ ಡಾ.ರಂಗನಾಥ್ ಅರಣ್ಯ ಇಲಾಖೆಗೆ ದೇವಸ್ಥಾನದ ಹಿಂಭಾಗ ಚಿರತೆ ಸೆರೆ ಹಿಡಿಯಲು ಬೋನನ್ನು ಇಡುವಂತೆ ಮನವಿ ಮಾಡಿದ್ದರು. ಅದರಂತೆ ದೇವಾಲಲಯದ ದಾಸೋಹ ಮಠದ ಹಿಂಭಾಗದಲ್ಲಿ ಬೋನಿಡಲಾಗಿತ್ತು. 
ಈಗ ಬೋನಿಗೆ ಸುಮಾರು 2.5 ವರ್ಷದ ಹೆಣ್ಣು ಚಿರತೆಯೊಂದು ಬಿದ್ದಿದ್ದು ಆ ಭಾಗದ ಗ್ರಾಮದ ಗ್ರಾಮಸ್ಥರ ಸ್ವಲ್ಪ ನೆಮ್ಮದಿಯನ್ನು ತಂದಿದೆ. ಇನ್ನೂ 2-3 ಚಿರತೆಗಳು ಆ ಭಾಗದಲ್ಲಿ ಸಂಚರಿಸುವ ಮಾಹಿತಿ ಇದ್ದು ಅವುಗಳ ಸೆರೆಗೆ ಇಲಾಖೆ ಕಾರ್ಯೋನ್ಮಖವಾಗಿದೆ.
ಇಂದು ಬೋನಿಗೆ ಚಿರತೆ ಬಿದ್ದಿರುವ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಡಿ.ಆರ್.ಎಫ್. ವಿಜಯ ಕುಮಾರ್, ಗಾರ್ಡ್ ಉಗ್ರಪ್ಪ, ಹರೀಶ್ ಮತ್ತು ಗಂಗರಾಜು ಬೋನಿನಲ್ಲಿದ್ದ ಚಿರತೆಯನ್ನು ಸುರಕ್ಷಿತವಾಗಿ ರಕ್ಷಿಸಿ ತೆಗೆದುಕೊಂಡು ಹೋಗಿದ್ದಾರೆ.
ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ವರದಿ: ಗಿರೀಶ್ ಕೆ ಭಟ್


