ತುರುವೇಕೆರೆ : ಬ್ರಹ್ಮಶ್ರೀ ನಾರಾಯಣಗುರು ಅವರ 172ನೇ ಹಾಗೂ ಶರಣ ನುಲಿಯ ಚಂದಯ್ಯನವರ 919ನೇ ಜಯಂತ್ಯೋತ್ಸವವನ್ನು ಆಗಸ್ಟ್ 28ರಂದು ಆಚರಿಸಲು ಇಂದು ತಾಲ್ಲೂಕು ಕಛೇರಿಯಲ್ಲಿ ಗ್ರೇಡ್ 2 ತಹಸೀಲ್ದಾರ್ ಸುನಿಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ತಾಲ್ಲೂಕು ಈಡಿಗ ಸಮಾಜದ ಅಧ್ಯಕ್ಷ ಎಸ್.ಎಲ್.ಎನ್. ರಾಜಣ್ಣ, ಪ್ರತಿ ವರ್ಷದಂತೆ ಈ ವರ್ಷವೂ ಸರ್ಕಾರದ ಆಶಯದಂತೆ ತಾಲ್ಲೂಕು ಆಡಳಿತ ಯಾವುದೇ ಲೋಪವಿಲ್ಲದಂತೆ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಆಚರಿಸಬೇಕು. ತಾಲ್ಲೂಕು ಆಡಳಿತಕ್ಕೆ ಈಡಿಗ ಸಮುದಾಯ ಸರ್ವ ರೀತಿಯಲ್ಲಿ ಸಹಕಾರ ನೀಡುತ್ತದೆ ಎಂದರು.
ತಾಲ್ಲೂಕು ಕೊರಮ ಕೊರಚ ಸಮುದಾಯದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, 12 ನೇ ಶತಮಾನದ ಶರಣ ನುಲಿಯ ಚಂದಯ್ಯನವರ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡುತ್ತಿರುವುದು ನಮ್ಮೆಲ್ಲರಿಗೂ ಸಂತಸದ ವಿಚಾರವಾಗಿದೆ. ತಾಲೂಕು ಆಡಳಿತ ಪ್ರತಿ ವರ್ಷದಂತೆ ನುಲಿಯ ಚಂದಯ್ಯನವರ ಜಯಂತಿಯನ್ನು ಆಚರಿಸಲು ತೀರ್ಮಾನಿಸಿದ್ದು, ಸಮುದಾಯ ಅಗತ್ಯ ಸಹಕಾರ ನೀಡುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಎರಡೂ ಸಮಾಜದ ಅಧ್ಯಕ್ಷರು, ಸದಸ್ಯರುಗಳು ಕಳೆದ ಎರಡು ಮೂರು ವರ್ಷದಿಂದ ಜಯಂತಿ ಆಚರಣೆಯ ಅನುದಾನ ದೊರೆತಿಲ್ಲವಾದ್ದರಿಂದ ಕೂಡಲೇ ಅನುದಾನ ಒದಗಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಗ್ರೇಡ್ 2 ತಹಸೀಲ್ದಾರ್ ಸುನಿಲ್ ಕುಮಾರ್, ಈ ಕುರಿತಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅನುದಾನ ಬಂದ ತಕ್ಷಣ ನೀಡಲಾಗುವುದು. ಆಗಸ್ಟ್ 28 ರಂದು ಶಾಸಕ ಎಂ.ಟಿ.ಕೃಷ್ಣಪ್ಪನವರ ಅಧ್ಯಕ್ಷತೆಯಲ್ಲಿ ನಡೆಯುವ ಬ್ರಹ್ಮಶ್ರೀ ನಾರಾಯಣ ಗುರುಗಳು ಹಾಗೂ ನುಲಿಯ ಚಂದಯ್ಯನವರ ಜಯಂತಿಗೆ ಸಮುದಾಯದ ಎಲ್ಲರೂ ಸಹಕಾರ ನೀಡಬೇಕು ಹಾಗೂ ಬೆಳಿಗ್ಗೆ 10.30ಕ್ಕೆ ತಾಲೂಕು ಕಛೇರಿ ಆವರಣದಲ್ಲಿ ನಡೆಯುವ ಜಯಂತಿ ಆಚರಣೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದರು.
ಈಡಿಗ ಸಮಾಜದ ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ಗೋಪಾಲ್, ಆರ್ಯ ಈಡಿಗರ ಸಂಘದ ಜಿಲ್ಲಾ ನಿರ್ದೇಶಕ ಮುಗಳೂರು ಮಂಜುನಾಥ್, ಗ್ರಾಪಂ ಮಾಜಿ ಅಧ್ಯಕ್ಷ ದೇವರಾಜ್, ಕಾಂಗ್ರೆಸ್ ಒಬಿಸಿ ಅಧ್ಯಕ್ಷ ಚೇತನ್ ಕುಮಾರ್, ತಾಲ್ಲೂಕು ಕೊರಮ ಕೊರಚ ಸಮುದಾಯದ ಉಪಾಧ್ಯಕ್ಷ ವಿಠಲ್ ಕುಮಾರ್, ಖಜಾಂಚಿ ಕರಿಯಪ್ಪ, ಮಾಜಿ ಗೌರವಾಧ್ಯಕ್ಷ ರಾಮಾಂನಪ್ಪ ಹಾಗೂ ಕಂದಾಯ ಇಲಾಖೆಯ ವತ್ಸಲ ಉಪಸ್ಥಿತರಿದ್ದರು
ವರದಿ: ಗಿರೀಶ್ ಕೆ ಭಟ್


