ಬೆಂಗಳೂರು: "ಕೇವಲ ಪ್ರಚಾರ ಮತ್ತು ವ್ಯೂಸ್ ಗಳಿಸುವುದಕ್ಕಾಗಿ ಜೀವಂತ ಇರುವವರ ಸಾವಿನ ಸುಳ್ಳು ಸುದ್ದಿ ಬಿತ್ತರಿಸುವ ಮುಖೇಡಿಗಳ ಹೆಡೆಮುರಿ ಕಟ್ಟಿ ತಕ್ಷಣವೇ ಪರಪ್ಪನ ಅಗ್ರಹಾರ ಜೈಲಿಗೆ ಅಟ್ಟಬೇಕು" ಎಂದು ಸ್ಯಾಂಡಲ್ವುಡ್ನ ಹಿರಿಯ ಪೋಷಕ ನಟ ದೊಡ್ಡಣ್ಣ ಸಿಡಿದೆದ್ದಿದ್ದಾರೆ.
ತಮ್ಮ ನಿಧನದ ಕುರಿತು ರಾಜ್ಯ ಮಟ್ಟದಲ್ಲಿ ಸುಳ್ಳು ವದಂತಿ ಹರಡಿದ್ದ ಕಿಡಿಗೇಡಿಗಳ ವಿರುದ್ಧ ಅವರು ಬೆಂಗಳೂರಿನ ಸೈಬರ್ ಕ್ರೈಂ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ನಟ ದೊಡ್ಡಣ್ಣ ಅವರು ವಿಧಿವಶರಾಗಿದ್ದಾರೆ ಎಂಬ ಸುಳ್ಳು ಪೋಸ್ಟ್ಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು.
ಇದರಿಂದ ಆತಂಕಗೊಂಡ ನೂರಾರು ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ದೊಡ್ಡಣ್ಣ ಅವರಿಗೆ ಸತತ ಫೋನ್ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು.
ಅಂದೇ ವಿಡಿಯೋ ಬಿಡುಗಡೆ ಮಾಡಿದ್ದ ಹಿರಿಯ ನಟ:
ತಮ್ಮ ಸಾವಿನ ಸುಳ್ಳು ವಾರ್ತೆ ಹರಿದಾಡಿದ ದಿನವೇ ಸಾಮಾಜಿಕ ಮಾಧ್ಯಮಗಳ ಮೂಲಕ ವಿಡಿಯೋ ಸಂದೇಶ ರವಾನಿಸಿದ್ದ ದೊಡ್ಡಣ್ಣ, "ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ, ಯಾರೂ ಆತಂಕ ಪಡಬೇಡಿ" ಎಂದು ಸ್ಪಷ್ಟನೆ ನೀಡಿದ್ದರು.
ಜೊತೆಗೆ ಈ ಕೃತ್ಯ ಎಸಗಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದ್ದರು. ಅದರಂತೆ ಈಗ ಸೈಬರ್ ಪೊಲೀಸ್ ಕಚೇರಿಗೆ ಭೇಟಿ ನೀಡಿ ಲಿಖಿತ ದೂರು ದಾಖಲಿಸಿದ್ದಾರೆ.


