ನಿಜಾಮಾಬಾದ್: ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ನ್ಯಾಲ್ಕಲ್ ಗ್ರಾಮದಲ್ಲಿ ಪತ್ನಿಯೇ ತನ್ನ ಪ್ರೇಮಿ ಹಾಗೂ ಮತ್ತೊಬ್ಬಾತನ ಜೊತೆ ಸೇರಿ ಪತಿಯನ್ನು (Crime) ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿರುವ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ.
ಕಟ್ಟಡದ ಮೇಲಿಂದ ತಳ್ಳಿ ಕೊಲ್ಲಲು ಯತ್ನಿಸಿ ಅದು ವಿಫಲವಾದಾಗ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತಿಗೆ ನರ್ಸ್ ಆಗಿದ್ದ ಪತ್ನಿಯೇ ಕ್ಯಾನುಲಾ ಮೂಲಕ ಟಾಯ್ಲೆಟ್ ಕ್ಲೀನರ್ ಇಂಜೆಕ್ಟ್ ಮಾಡಿ ಪ್ರಾಣ ತೆಗೆದಿದ್ದಾಳೆ.
ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ
ಕೊಲೆಯಾದ ದುರ್ದೈವಿಯನ್ನು 35 ವರ್ಷದ ಪ್ರಶಾಂತ್ ಎಂದು ಗುರುತಿಸಲಾಗಿದೆ. ಇತ್ತೀಚೆಗಷ್ಟೇ ಅಂದರೆ ಜೂನ್ 27 ಅಥವಾ 28 ರಂದು ಗಲ್ಫ್ ದೇಶದಿಂದ ಊರಿಗೆ ಮರಳಿದ್ದ ಪ್ರಶಾಂತ್, ಪತ್ನಿ ಸಂಧ್ಯಾ ಹಾಗೂ ಆಕೆಯ ಪ್ರೇಮಿ ಅನಿಲ್ ನಡುವಿನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ. ಇದೇ ಕಾರಣಕ್ಕೆ ಸಂಧ್ಯಾ, ಪ್ರೇಮಿ ಅನಿಲ್ ಹಾಗೂ ಮತ್ತೊಬ್ಬ ಸಹಚರ ವೆಂಕಟ ಸಾಯಿ ಅಲಿಯಾಸ್ ಬಂಟಿ ಎಂಬುವವರ ಜೊತೆ ಸೇರಿ ಪತಿಯನ್ನು ಮುಗಿಸಲು ಸಂಚು ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಯೋಜನೆಯ ಪ್ರಕಾರ ಜೂನ್ 29 ರಂದು ಸಂಧ್ಯಾ ಸೂಚನೆ ಮೇರೆಗೆ ಬಂಟಿ, ಪ್ರಶಾಂತ್ನನ್ನು ಕರೆದುಕೊಂಡು ಹೋಗಿ ಫುಲ್ ಕುಡಿಸಿದ್ದಾನೆ.
ಬಳಿಕ ಇಬ್ಬರೂ ಮದ್ಯದ ಮತ್ತಿನಲ್ಲಿ ಕಟ್ಟಡದ ಮಹಡಿ ಮೇಲಕ್ಕೆ ಹೋದಾಗ ಜಗಳ ಶುರುವಾಗಿದೆ. ಈ ವೇಳೆ ಅಲ್ಲಿಗೆ ಬಂದ ಸಂಧ್ಯಾ ಮತ್ತು ಬಂಟಿ ಇಬ್ಬರೂ ಸೇರಿ ಪ್ರಶಾಂತ್ನನ್ನು ಮಹಡಿಯಿಂದ ಕೆಳಗೆ ತಳ್ಳಿದ್ದಾರೆ.
ಆದರೆ ಅದೃಷ್ಟವಶಾತ್ ತೀವ್ರ ಗಾಯಗಳ ನಡುವೆಯೂ ಪ್ರಶಾಂತ್ ಬದುಕುಳಿದಿದ್ದ. ತಕ್ಷಣ ಆತನನ್ನು ಮೊದಲು ಸರ್ಕಾರಿ ಆಸ್ಪತ್ರೆಗೆ, ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.


