ಮುಂಬೈ: ಮಹಾರಾಷ್ಟ್ರದಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರಿದಿದ್ದು, ಸೋಮವಾರ ಮುಂಬೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಸಂಬಂಧಿತ ವಿವಿಧ ಅವಘಡಗಳಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ.
ಇದೇ ವೇಳೆ, ಲೋಹಗಡ್ ಕೋಟೆ ಸಮೀಪದ ಪಾಟಣ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದ್ದು, ಒಂದು ಕುಟುಂಬ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.
ಭಾರೀ ಮಳೆಯ ಪರಿಣಾಮ ಪುಣೆ-ಮುಂಬೈ ಎಕ್ಸ್ಪ್ರೆಸ್ವೇ ಹಾಗೂ ಹಳೆಯ ಮುಂಬೈ-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರವನ್ನು ಎರಡೂ ದಿಕ್ಕುಗಳಲ್ಲಿ ಸ್ಥಗಿತಗೊಳಿಸಲಾಗಿದೆ.
ಪರ್ಯಾಯ ಮಾರ್ಗಗಳಾದ ಮಾವಲ್ ಮತ್ತು ತಾಮಿಣಿ ಘಾಟ್ ಪ್ರದೇಶಗಳಲ್ಲೂ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
3 ಗಂಟೆಗಳ ರೆಡ್ ಅಲರ್ಟ್
ಭಾರತೀಯ ಹವಾಮಾನ ಇಲಾಖೆ (IMD) ಜುಲೈ 6ರ ಬೆಳಿಗ್ಗೆ 4 ಗಂಟೆಗೆ ಮುಂಬೈ, ಪಾಲ್ಘರ್, ರೈಗಡ್ ಹಾಗೂ ಥಾಣೆ ಜಿಲ್ಲೆಗಳಿಗೆ 3 ಗಂಟೆಗಳ ರೆಡ್ ಅಲರ್ಟ್ ಘೋಷಿಸಿದೆ. ಗಂಟೆಗೆ 50-60 ಕಿ.ಮೀ. ವೇಗದ ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.
ಮರ ಬಿದ್ದು, ಮ್ಯಾನ್ಹೋಲ್ಗೆ ಬಿದ್ದು ಜೀವಹಾನಿ
ಮಳೆಯ ಅಬ್ಬರದಿಂದ ವಿವಿಧ ಸ್ಥಳಗಳಲ್ಲಿ ದುರ್ಘಟನೆಗಳು ಸಂಭವಿಸಿವೆ.ಕುರ್ಳಾದಲ್ಲಿ ರಸ್ತೆ ಬದಿಯ ಅಂಗಡಿಯ ಮೇಲೆ ಮರ ಬಿದ್ದ ಪರಿಣಾಮ 63 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.
ಸಾಕಿ ನಾಕಾದಲ್ಲಿ ಮಳೆ ನೀರಿನಲ್ಲಿ ಮುಚ್ಚಿಹೋಗಿದ್ದ ಮ್ಯಾನ್ಹೋಲ್ಗೆ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.
ಚೆಂಬೂರ್ನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿದ ಪರಿಣಾಮ 11 ವರ್ಷದ ವಿದ್ಯಾರ್ಥಿ ಮೃತಪಟ್ಟಿದ್ದಾನೆ.ನವಿ ಮುಂಬೈನ ಖಾರ್ಘರ್ನ ಪಾಂಡವಕಡ ಜಲಪಾತದಲ್ಲಿ ಪ್ರವೇಶ ನಿಷೇಧವಿದ್ದರೂ ತೆರಳಿದ್ದ ಇಬ್ಬರು ಯುವಕರು ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.ಮೀರಾ ರೋಡ್-ಭಯಂದರ್ ಪ್ರದೇಶದಲ್ಲಿ ತೆಂಗಿನ ಮರ ಬೈಕ್ ಸವಾರನ ಮೇಲೆ ಬಿದ್ದು ಮತ್ತೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.


