ಧಾರವಾಡ :ಟಾಟಾ ಮೋಟಾರ್ಸ್ ಫೌಂಡೇಶನ್ ಸಂಸ್ಥೆಯು ಸುಸ್ಥಿರ ಗ್ರಾಮೀಣಾಭಿವೃದ್ಧಿಯ ಬದ್ಧತೆಯೊಂದಿಗೆ ಧಾರವಾಡ ಜಿಲ್ಲೆಯ ಬೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತನ್ನ ಪ್ರಮುಖ ‘ಸಮಗ್ರ ಗ್ರಾಮ ಅಭಿವೃದ್ಧಿ ಕಾರ್ಯಕ್ರಮ’ವನ್ನು ಆರಂಭಿಸಿದೆ. ಧಾರವಾಡ ಜಿಲ್ಲಾ ಪಂಚಾಯಿತಿ ಸಿಇಓ ಭುವನೇಶ್ ಪಾಟೀಲ್ ಅವರು ಟಾಟಾ ಮೋಟಾರ್ಸ್ನ ಧಾರವಾಡ ಪ್ಲಾಂಟ್ ಹೆಡ್ ವಿಜಯ್ ಕುಮಾರ್ ಬಟ್ಟು ಅವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.
'ಬೈಫ್' ಸಂಸ್ಥೆಯ ಸಹಭಾಗಿತ್ವದಲ್ಲಿ ಜಾರಿಯಾಗುತ್ತಿರುವ ಈ ಯೋಜನೆಯು ಬೇಲೂರು, ಹೆಗ್ಗೇರಿ ಮತ್ತು ನೀರಲಕಟ್ಟಿ ಗ್ರಾಮಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಲ್ಯಾಣ ಯೋಜನೆಗಳನ್ನು ಸಂಯೋಜಿಸುವ ಮೂಲಕ ಸಾರ್ವಜನಿಕ ಸೇವೆಗಳ ಲಭ್ಯತೆಯನ್ನು ಸುಧಾರಿಸುವ ಮತ್ತು ಸ್ಥಳೀಯ ಆಡಳಿತವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.ಬೇಲೂರು ಗ್ರಾಮ ಪಂಚಾಯಿತಿಯಲ್ಲಿ ಸಾಕ್ಷರತೆ ಉತ್ತಮವಾಗಿದ್ದರೂ, ಕೃಷಿಯನ್ನೇ ನೆಚ್ಚಿಕೊಂಡಿರುವ ಇಲ್ಲಿನ ಜನರಿಗೆ ಸೀಮಿತ ಉದ್ಯೋಗಾವಕಾಶಗಳು ಹಾಗೂ ಮೂಲಸೌಕರ್ಯ ಸವಾಲುಗಳಿರುವುದು ಕಂಡುಬಂದಿದೆ. 
ಈ ಯೋಜನೆ ಕುರಿತು ಮಾತನಾಡಿದ ಟಾಟಾ ಮೋಟಾರ್ಸ್ ಫೌಂಡೇಶನ್ ಸಿಇಓ ವಿನೋದ್ ಕುಲಕರ್ಣಿ, “ಸರ್ಕಾರಿ ಯೋಜನೆಗಳ ಸಂಯೋಜನೆ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಹಾಗೂ ಸಮುದಾಯದ ಒಡೆತನದ ಭಾವನೆಯು ಹಿಂದುಳಿದ ಪ್ರದೇಶಗಳಲ್ಲಿ ದೊಡ್ಡ ಬದಲಾವಣೆ ತರಬಲ್ಲದು. ಬೇಲೂರು ಪಂಚಾಯಿತಿಯನ್ನು ಸ್ವತಂತ್ರವಾಗಿ ಅಭಿವೃದ್ಧಿಯತ್ತ ಮುನ್ನಡೆಸಲು ಸಬಲೀಕರಣಗೊಳಿಸುವುದು ನಮ್ಮ ಮುಖ್ಯ ಉದ್ದೇಶ” ಎಂದರು.
2018 ರಲ್ಲಿ ಪ್ರಾರಂಭವಾದ ಸಮಗ್ರ ಗ್ರಾಮ ವಿಕಾಸ ಕಾರ್ಯಕ್ರಮವು ಪ್ರಸ್ತುತ 5 ರಾಜ್ಯಗಳ 103 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 200 ಹಳ್ಳಿಗಳಿಗೆ ವಿಸ್ತರಿಸಿದೆ. ಆರ್ಥಿಕ ವರ್ಷ 2025-26 ರಲ್ಲಿ ಈ ಕಾರ್ಯಕ್ರಮವು 1,15,000 ಕ್ಕೂ ಹೆಚ್ಚು ಜನರ ಜೀವನದ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದ್ದು, ₹20 ಕೋಟಿ ಮೌಲ್ಯದ 50 ಸರ್ಕಾರಿ ಕಲ್ಯಾಣ ಯೋಜನೆಗಳನ್ನು ಯಶಸ್ವಿಯಾಗಿ ಸಂಯೋಜಿಸಿದೆ. ದಾಖಲಾತಿ ಕೊರತೆ ನೀಗಿಸಿ, ಕೊನೆಯ ಮೈಲಿಯವರೆಗೂ ಸರ್ಕಾರಿ ಸೇವೆಗಳನ್ನು ತಲುಪಿಸಲು ಈ ಯೋಜನೆ ಕೊಂಡಿಯಾಗಿ ಕೆಲಸ ಮಾಡಲಿದೆ.
ವರದಿ:ಸುದೀರ್ ಕುಲಕರ್ಣಿ


