ತುರುವೇಕೆರೆ : ಹೇಮಾವತಿ ಅಣೆಕಟ್ಟಿನಿಂದ ಜಿಲ್ಲೆಯ ಕೆರೆಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿ ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕರಾದ ಮಸಾಲಾ ಜಯರಾಮ್, ಎಂ.ಡಿ.ಲಕ್ಷ್ಮೀನಾರಾಯಣ್ ನೇತೃತ್ವದಲ್ಲಿ ಜೆಡಿಎಸ್, ಬಿಜೆಪಿ ಕಛೇರಿಯಿಂದ ಪಾದಯಾತ್ರೆ ಮೂಲಕ ತೆರಳಿದ ಮೈತ್ರಿಕೂಟದ ಮುಖಂಡರು, ಕಾರ್ಯಕರ್ತರು ಪಟ್ಟಣದ ಹೇಮಾವತಿ ನಾಲಾ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ರಾಜ್ಯ ಸರ್ಕಾರ ರಾಜ್ಯದ ಅಭಿವೃದ್ದಿಯನ್ನು ಕಡೆಗಣಿಸಿ ಕಳೆದೆರಡು ತಿಂಗಳಿಂದ ದೆಹಲಿ, ಬೆಂಗಳೂರು ನಡುವೆ ಪ್ರಯಾಣ ನಡೆಸುತ್ತಾ ಸಂಪುಟ ವಿಸ್ತರಣೆ, ಖಾತೆ ಹಂಚಿಕೆಯ ವಿಚಾರದಲ್ಲೇ ಕಾಲಕಳೆಯುತ್ತಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಕೆಲವರು ಪೇಮೆಂಟ್ ಕೋಟಾದಲ್ಲಿ ಮಂತ್ರಿಗಿರಿ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ತುಮಕೂರು ಜಿಲ್ಲೆ ಬರದಿಂದ ತತ್ತರಿಸಿದ್ದು, ಕೆರೆಕಟ್ಟೆಗಳಲ್ಲಿ ಹನಿ ನೀರಿಲ್ಲ. ಈ ವರ್ಷ ಶೇ.30 ರಷ್ಟು ಮಾತ್ರ ಮಳೆಯಾಗಿದೆ. ಅಂತರ್ಜಲ ಕುಸಿದಿದ್ದು, ಕೊಳವೆಬಾವಿಗಳು ಬತ್ತಿಗಹೋಗಿದೆ. ರೈತರು ಭಿತ್ತನೆ ಮಾಡಲು ಸಾಧ್ಯವಾಗಿಲ್ಲ. ತೆಂಗು, ಅಡಿಕೆ ಗಿಡಗಳು ನೀರಿಲ್ಲದ ಒಣಗುತ್ತಿದೆ. ಹೇಮಾವತಿ ಜಲಾಶಯದಲ್ಲಿ ಸಾಕಷ್ಟು ನೀರಿದ್ದು ಸರ್ಕಾರ ಕೂಡಲೇ ಹೇಮಾವತಿ ನಾಲೆ ಮೂಲಕ ಜಿಲ್ಲೆಯ ಕೆರೆಕಟ್ಟೆಗಳಿಗೆ ನೀರು ಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಾಜಿ ಶಾಸಕ ಮಸಾಲಾ ಜಯರಾಮ್ ಮಾತನಾಡಿ, ಸರ್ಕಾರ ಕುರ್ಚಿ ಆಟವನ್ನು ಬದಿಗಿಟ್ಟು ರೈತರ ಸಂಕಷ್ಟಕ್ಕೆ ಧಾವಿಸಬೇಕು. ಮುಂಗಾರು ಮಳೆ ಕೈಕೊಟ್ಟಿದ್ದು ಬರಗಾಲ ತಾಂಡವವಾಡುತ್ತಿದೆ. ಕೂಡಲೇ ತುರುವೇಕೆರೆ ವಿಧಾನಸಭಾ ಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕು. ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಂಟಾಗಿದ್ದು ಗೋಶಾಲೆ ತೆರೆಯಬೇಕು. ತೆಂಗು, ಅಡಿಕೆಯನ್ನೇ ನಂಬಿರುವ ರೈತರು ಮಳೆಯಿಲ್ಲದೆ ನೀರಿಲ್ಲದೆ ಪರಿತಪಿಸುತ್ತಿದ್ದಾರೆ, ಇದರ ಜೊತೆಗೆ ವಿದ್ಯುತ್ ಸಮಸ್ಯೆ ತಲೆದೋರಿದೆ. ಸರ್ಕಾರ ನಿಗದಿಯಂತೆ ರೈತರ ಪಂಪ್ ಸೆಟ್ ಗಳಿಗೆ ತ್ರಿಫೇಸ್ ವಿದ್ಯುತ್ ಅನ್ನು ಒದಗಿಸಬೇಕು. ಜಿಲ್ಲೆಯ ಕೆರೆಕಟ್ಟೆಗಳಿಗೆ ಕೂಡಲೇ ಹೇಮಾವತಿ ನೀರು ಹರಿಸದಿದ್ದರೆ ಜಿಲ್ಲೆಯ ಲಕ್ಷಾಂತರ ರೈತರೊಡಗೂಡಿ ಹಾಸನದ ಗೊರೂರು ಡ್ಯಾಂವರೆಗೆ ಪಾದಯಾತ್ರೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಮಾತನಾಡಿ, ಆಗಸ್ಟ್ ತಿಂಗಳು ಬಂದರೂ ಸಹ ಈವರೆಗೆ ಹೇಮಾವತಿ ಜಲಾಶಯದಿಂದ ಕಾಲುವೆಗಳ ಮೂಲಕ ಕೆರೆಕಟ್ಟೆಗಳಿಗೆ ನೀರು ಹರಿಸುವ ಬಗ್ಗೆ ಸರ್ಕಾರವಾಗಲೀ, ಜಿಲ್ಲಾ ಉಸ್ತುವಾರಿ ಸಚಿವರಾಗಲೀ ಗಮನಹರಿಸಿಲ್ಲ. ಜಿಲ್ಲೆಯ ತಾಲೂಕಿನ ರೈತರ ಹಿತವನ್ನು ಕಡೆಗಣಿಸಿ, ಈ ಭಾಗದ ಕೆರೆಕಟ್ಟೆಗಳಿಗೆ ನೀರು ಹರಿಸುವುದನ್ನು ನಿರ್ಲಕ್ಷಿಸಿ ಹೇಮಾವತಿ ಜಲಾಶಯದಿಂದ ಕಾವೇರಿ ಜಲಾಶಯಕ್ಕೆ 500 ಎಂಸಿಎಫ್ಟಿ ನೀರನ್ನು ಹರಿಸುತ್ತಿರುವುದು ಖಂಡನೀಯ. ಹೇಮಾವತಿ ಜಲಾಶಯದಲ್ಲಿ 29 ಟಿಎಂಸಿ ನೀರಿದ್ದು, ಕ್ಷೇತ್ರದ ಕೆರೆಕಟ್ಟೆಗಳಿಗೆ ನೀರು ಹರಿಸಿ ರೈತರ ನೆರವಿಗೆ ಧಾವಿಸಬೇಕು. ಬರಗಾಲ ತಾಂಡವವಾಡುತ್ತಿದ್ದು ಕೂಡಲೇ ಜಿಲ್ಲೆಯ ಕೆರೆಕಟ್ಟೆಗಳಿಗೆ ನೀರು ಹರಿಸಬೇಕು. ತುರುವೇಕೆರೆ ವಿಧಾನಸಭಾ ಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕೆಂದು ಆಗ್ರಹಿಸಿದರು. 
ಮುಂಬರುವ ಆಗಸ್ಟ್ 14 ಶುಕ್ರವಾರದೊಳಗೆ ಜಿಲ್ಲೆಯ ಕೆರೆಕಟ್ಟೆಗಳಿಗೆ ಹೇಮಾವತಿ ನೀರು ಹರಿಸದಿದ್ದರೆ ಪುನಃ ಸೋಮವಾರದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮೈತ್ರಿ ಪಕ್ಷದ ನಾಯಕರು ಹೇಮಾವತಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೇಮಾವತಿ ನಾಲಾ ಎಸ್.ಇ. ಶ್ರೀನಿವಾಸ್, ಶುಕ್ರವಾರ ನೀರಾವರಿ ಸಲಹಾ ಸಮಿತಿ ಸಭೆಯಿದ್ದು, ಅಂದು ಹೇಮಾವತಿ ನಾಲಾ ನೀರನ್ನು ಕಾಲುವೆ ಮೂಲಕ ಕೆರೆಕಟ್ಟೆಗಳಿಗೆ ಹರಿಸುವ ಕುರಿತು ತೀರ್ಮಾನವಾಗಲಿದೆ. ಅಲ್ಲಿಯವರೆಗೆ ಸಹಕರಿಸುವಂತೆ ಮನವಿ ಮಾಡಿದರು. ಹೇಮಾವತಿ ಅಧಿಕಾರಿಗಳು ನೀಡಿದ ಭರವಸೆ ಹಿನ್ನೆಲೆ ಪ್ರತಿಭಟನೆ ಕೈಬಿಡಲಾಯಿತು.
ಗುಬ್ಬಿ ಬಿಜೆಪಿ ಮುಖಂಡ ದಿಲೀಪ್, ತಾಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ್, ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಕಡೇಹಳ್ಳಿ ಸಿದ್ದೇಗೌಡ, ತಾಲೂಕು ಉಪಾಧ್ಯಕ್ಷರಾದ ಸಂತೋಷ್ ಕಂಟ್ಲಿ, ಮಂಜೇಗೌಡ, ನವೀನ್ ಬಾಬು, ಸಿದ್ದಪ್ಪಾಜಿ, ಖಜಾಂಚಿ ಹರಿಕಾರನಹಳ್ಳಿ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಯೋಗಾನಂದ್, ಮಹೇಶ್, ಯುವಮೋರ್ಚಾ ಅಧ್ಯಕ್ಷ ತೀರ್ಥಕುಮಾರ್, ಬಿಜೆಪಿ ನಗರ ಅಧ್ಯಕ್ಷ ರಾಘವೇಂದ್ರ, ಜೆಡಿಎಸ್ ಅಧ್ಯಕ್ಷ ದೊಡ್ಡೇಗೌಡ, ಮುಖಂಡರಾದ ವಿಜಯೇಂದ್ರ ಕುಮಾರ್, ಕುಶಾಲ್ ಕುಮಾರ್, ಲೀಲಾವತಿ ಗಿಡ್ಡಯ್ಯ, ಮಂಗಿಕುಪ್ಪೆ ಬಸವರಾಜ್ ಸೇರಿದಂತೆ ಬಿಜೆಪಿ, ಜೆಡಿಎಸ್ ಪಕ್ಷ ಸಹಸ್ರಾರು ಕಾರ್ಯಕರ್ತರು, ರೈತರು ಪ್ರತಿಭಟನಾ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ಗಿರೀಶ್ ಕೆ ಭಟ್


