ತುರುವೇಕೆರೆ: ಪ್ರಕೃತಿಯಿಂದಲೇ ಇಂದು ಎಲ್ಲಾ ಜೀವರಾಶಿಗಳು ಉಸಿರಾಡುತ್ತಿವೆ. ಪರಿಸರ ಸಂರಕ್ಷಿಸಿದರೆ ಮಾತ್ರ ಜೀವ ಸಂಕುಲ ಉಳಿಯಲು ಸಾಧ್ಯ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಪಟ್ಟಣ ಪಂಚಾಯ್ತಿ, ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ನೀರು ಹಾಕಿ ಮಾತನಾಡಿದ ಅವರು, ವಿಶ್ವದೆಲ್ಲೆಡೆ ಇಂದು ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮನುಕುಲ, ಜೀವ ಸಂಕುಲಗಳು ಉಳಿದಿರುವುದೇ ಪ್ರಕೃತಿಯಿಂದ, ಅಂತಹ ಪ್ರಕೃತಿ ಇಂದು ಹಾಳಾಗುತ್ತಿದೆ. ಕಾಡು ಉಳಿದರೆ ನಾಡು ಎಂಬ ಸಂದೇಶ ಸಾರ್ವಕಾಲಿಕ ಸತ್ಯವಾದುದು. ಪ್ರಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರೀಕರದ್ದಾಗಿದೆ. ಪರಿಸರ ಸಂರಕ್ಷಿಸುವ ಕೆಲಸ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ ಪ್ರತಿನಿತ್ಯ ಪರಿಸರ ಉಳಿಸುವ ಹೊಣೆಗಾರಿಕೆಯನ್ನು ನಿರ್ವಹಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸ್ವಪ್ನನಟೇಶ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ಲಿಂಗರಾಜು, ಒಕ್ಕಲಿಗ ಸಮಾಜದ ನಿರ್ದೇಶಕ ಕಾಂತರಾಜು, ಪಪಂ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಪಪಂ ಅಧಿಕಾರಿಗಳಾದ ಪ್ರಶಾಂತ್ ಭದ್ರಣ್ಣನವರ್, ಸದಾನಂದ್, ರಂಗನಾಥ್, ಶಿಕ್ಷಣ ಇಲಾಖೆಯ ಸುರೇಶ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ವಸಂತಕುಮಾರ್, ಮುಖ್ಯಶಿಕ್ಷಕ ಸತೀಶ್, ಮುಖಂಡ ಯೋಗೀಶ್, ಉಪವಲಯ ಅರಣ್ಯಾಧಿಕಾರಿ ತಿಪ್ಪೇಶ್, ಅರಣ್ಯಪಾಲಕ ಗಂಗಾಧರ್ ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್

