ಬೆಂಗಳೂರು : ಬೆಂಗಳೂರಿನ ವಿಧಾನಸೌಧದಲ್ಲಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ರಾಜಕೀಯ ಸಮರ ಏರ್ಪಟ್ಟಿದೆ.
ಪ್ರಕರಣದ ಹಿನ್ನೆಲೆಯಲ್ಲಿ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಪಟ್ಟು ಹಿಡಿದು ಬಿಜೆಪಿ ಶಾಸಕರು ಸದನದಲ್ಲಿ ನಿರಂತರ ಪ್ರತಿಭಟನೆ ಹಾಗೂ ಹೋರಾಟ ನಡೆಸುತ್ತಿದ್ದಾರೆ.
ಈ ವೇಳೆ ವಿಪಕ್ಷಗಳ ಆರೋಪಗಳಿಗೆ ಪ್ರತ್ಯುತ್ತರ ನೀಡಿದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ, ಬಿಜೆಪಿ ನಾಯಕರು ಕೇವಲ ಮಾತಿನಲ್ಲಿ ಮಾತ್ರ ಎಸ್ಸಿ/ಎಸ್ಟಿ ಸಮುದಾಯಗಳ ರಕ್ಷಣೆ ಬಗ್ಗೆ ಮಾತನಾಡುತ್ತಾರೆ ಹೊರತು, ನಿಜವಾಗಿ ಅವರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಂಡರೆ ಆಗುವುದಿಲ್ಲ ಎಂದು ಕಟುವಾಗಿ ವಾಗ್ದಾಳಿ ನಡೆಸಿದರು.
ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದ ರಾಮ್ಲೀಲಾ ಮೈದಾನದಲ್ಲಿ ಭಾಷಣ ಮಾಡಿದ ಬಳಿಕ, ಕೆಲವು ಹಿಂದುತ್ವ ಪರ ಸಂಘಟನೆಗಳು ಆ ಜಾಗವನ್ನು ಹೋಮ-ಹವನ ನಡೆಸಿ ಶುದ್ಧೀಕರಣಗೊಳಿಸಿದ ಘಟನೆಯನ್ನು ಸಚಿವ ತಂಗಡಗಿ ತೀವ್ರವಾಗಿ ಖಂಡಿಸಿದರು.
"ದಲಿತ ನಾಯಕರೊಬ್ಬರು ಭಾಷಣ ಮಾಡಿದ ಜಾಗವನ್ನು ಗೋಮೂತ್ರ ಮತ್ತು ಹೋಮದ ಮೂಲಕ ಶುದ್ಧೀಕರಣ ಮಾಡುತ್ತೀರಿ ಎಂದರೆ ನಿಮಗೆ ಎಸ್ಸಿ/ಎಸ್ಟಿ ಸಮುದಾಯದ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕಿದೆ?" ಎಂದು ಪ್ರಶ್ನಿಸಿದ ಅವರು, ಬಿಜೆಪಿಯ ನಾಯಕ ಚಲವಾದಿ ನಾರಾಯಣಸ್ವಾಮಿ ಅವರ ಕುರ್ಚಿಗೂ ಮುಂದೊಂದು ದಿನ ಇಂತಹ ಹೋಮ-ಹವನ ಬರುತ್ತದೆ ಎಂದು ಎಚ್ಚರಿಸಿದರು.6


