ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ಶ್ರೀ ಗುರುನಂಜೇಶ್ವರ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀಮತಿ ಬಿ.ಬಿ. ಸಜ್ಜನ್ ಶೆಟ್ಟಿ ಸ್ಮಾರಕ ಹಾಗೂ ಶ್ರೀ ಗುರುನಂಜೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಸಂಸತ್ತು ಚುನಾವಣೆಯನ್ನು ಆಯೋಜಿಸಲಾಯಿತು.
8ನೇ ತರಗತಿಯಿಂದ 12ನೇ ತರಗತಿವರೆಗೆ ನಡೆದ ಈ ಚುನಾವಣೆಯಲ್ಲಿ ಒಟ್ಟು 323 ವಿದ್ಯಾರ್ಥಿಗಳು ಮತದಾರರಾಗಿ ಭಾಗವಹಿಸಿದ್ದರು. ಚುನಾವಣಾ ಕಣಕ್ಕೆ ಒಟ್ಟು 27 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ತರಗತಿವಾರು ಅಭ್ಯರ್ಥಿಗಳ ವಿವರ ಹೀಗಿದೆ: 8ನೇ ತರಗತಿಯಿಂದ 7 ಅಭ್ಯರ್ಥಿಗಳು, 9ನೇ ‘ಎ’ ತರಗತಿಯಿಂದ 4 ಅಭ್ಯರ್ಥಿಗಳು, 9ನೇ ‘ಬಿ’ ತರಗತಿಯಿಂದ 3 ಅಭ್ಯರ್ಥಿಗಳು, 10ನೇ ‘ಎ’ ತರಗತಿಯಿಂದ 5 ಅಭ್ಯರ್ಥಿಗಳು, 10ನೇ ‘ಬಿ’ ತರಗತಿಯಿಂದ 5 ಅಭ್ಯರ್ಥಿಗಳು ಹಾಗೂ ಪಿಯುಸಿ ವಿಭಾಗದಿಂದ 3 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದರು.
ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಅರಿವು, ನಾಯಕತ್ವ ಗುಣ ಹಾಗೂ ಜವಾಬ್ದಾರಿಯ ಮನೋಭಾವ ಬೆಳೆಸುವ ಉದ್ದೇಶದಿಂದ ಶಾಲಾ ಸಂಸತ್ತು ಚುನಾವಣೆಯನ್ನು ನಡೆಸಲಾಯಿತು ಎಂದು ಚುನಾವಣಾಧಿಕಾರಿ ಸೋಮನಾಥ ರೆಡ್ಡಿ ತಿಳಿಸಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿಗಳಾದ ಬಸವಂತ ರೆಡ್ಡಿ, ಶ್ರೀಮತಿ ವಿಮಲಮ್ಮ, ಶ್ರೀಮತಿ ಗಿರಿಜಾ, ಸುನಿಲ್ ಸಲ್ಗರ್, ಅಣವೀರ, ಉಸ್ಮಾನ್ ಪಟೇಲ್, ಸಲೀಂ ದೇಗುಲಮಡಿ, ಶಿವಕುಮಾರ್, ಅಂಬರೀಶ್, ಜೀವನ್, ಬಸವರಾಜ್, ಕುಮಾರಿ ಪ್ರಿಯಾಂಕ, ಕುಮಾರಿ ಭುವನೇಶ್ವರಿ, ಸಿದ್ದಯ್ಯ ಸ್ವಾಮಿ ಹಾಗೂ ಶಾಲೆಯ ಸಿಪಾಯಿ ಶ್ರೀಮತಿ ಲಕ್ಷ್ಮಿ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.
ಶಾಲಾ ಸಂಸತ್ತು ಚುನಾವಣೆ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ, ನಾಯಕತ್ವ ಮತ್ತು ಕರ್ತವ್ಯಪ್ರಜ್ಞೆಯನ್ನು ಬೆಳೆಸುವ ಉತ್ತಮ ವೇದಿಕೆಯಾಯಿತು.
ವರದಿ: ಸುನೀಲ್ ಸಲ್ಗರ್


