ಬೆಂಗಳೂರು: ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಜಾರಿ ನಿರ್ದೇಶನಾಲಯದ (ಇಡಿ) ಸಂಕಷ್ಟ ಮತ್ತಷ್ಟು ಬಿಗಿಯಾಗುವ ಸಾಧ್ಯತೆಯಿದೆ. ಹವಾಲಾ ಮೂಲದ ಅಕ್ರಮ ಹಣ ವಹಿವಾಟು ನಡೆದಿರುವ ಕುರಿತು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಮಹತ್ವದ ಮಾಹಿತಿ ಲಭ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಸಚಿವರ ವಿರುದ್ಧ ಅಧಿಕೃತ ಪ್ರಕರಣ ದಾಖಲಿಸಿ, ಎಫ್ಐಆರ್ ಸಿದ್ಧಪಡಿಸಲು ಇಡಿ ಅಧಿಕಾರಿಗಳು ತೀವ್ರ ಸಿದ್ಧತೆ ನಡೆಸಿದ್ದಾರೆ.
ಕರ್ನಾಟಕ ಮತ್ತು ಗೋವಾ ವಲಯದ ಇಡಿ ಜಂಟಿ ನಿರ್ದೇಶಕ ರಾಹುಲ್ ಜಾರ್ಜ್ ಅವರಿಗೆ ಇಡಿ ಕೇಂದ್ರ ಕಚೇರಿಯಿಂದ ಪ್ರಮುಖ ಜವಾಬ್ದಾರಿ ನೀಡಲಾಗಿದೆ. ಕಳೆದ ವರ್ಷವೇ ನಿವೃತ್ತಿ ಹೊಂದಬೇಕಿದ್ದ ರಾಹುಲ್ ಜಾರ್ಜ್, ಒಂದು ವರ್ಷದ ಸೇವಾವಿಸ್ತರಣೆ ಪಡೆದುಕೊಂಡಿದ್ದು, ರಾಜ್ಯದ ಪ್ರಮುಖ 13 ಪ್ರಕರಣಗಳನ್ನು ಕೇವಲ ಒಂದು ತಿಂಗಳ ಒಳಗಾಗಿ ಇತ್ಯರ್ಥಪಡಿಸುವಂತೆ ಅವರಿಗೆ ಇಡಿ ನಿರ್ದೇಶಕರು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಪ್ರಕರಣಗಳ ತನಿಖೆ ಏಕೆ ವಿಳಂಬವಾಗುತ್ತಿದೆ ಎಂದು ಪ್ರಶ್ನಿಸಿರುವ ಕೇಂದ್ರ ಇಡಿ ಮುಖ್ಯಸ್ಥರು, ಕೂಡಲೇ ತನಿಖೆಗೆ ವೇಗ ನೀಡುವಂತೆ ಬಿಗ್ ಟಾಸ್ಕ್ ನೀಡಿದ್ದಾರೆ.


