ಪಾವಗಡದಲ್ಲಿ ಸರ್ಕಾರಿ ನಿಯಮಕ್ಕೆ ಎಳ್ಳುನೀರು
ಅಧಿಕಾರಿಗಳೇ ಎಚ್ಚರ! ನಿಗದಿತ ಸಮಯ ಮೀರಿದರೂ ಶುರುವಾಗದ 'ಪ್ರಜಾಸೇವೆ ಅಭಿಯಾನ': ಅರ್ಜಿ ಹಿಡಿದು ಕಾದ ಕಾದ ಜನರು ಮನೆಗೆ ವಾಪಸ್!
ಪಾವಗಡ : ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ನಾಗಲಮಡಿಕೆ ಹೋಬಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ.
'ಪ್ರಜಾಸೇವೆ ಅಭಿಯಾನ' ಸಭೆಯಲ್ಲಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ಸರ್ಕಾರಿ ನಿಯಮಾವಳಿಗಳ ಪ್ರಕಾರ ಬೆಳಿಗ್ಗೆ 10:00 ಗಂಟೆಗೆ ಪ್ರಾರಂಭವಾಗಬೇಕಿದ್ದ ಸಭೆ, ಸಮಯ 11:50 ದಾಟಿದರೂ ಇನ್ನು ಆರಂಭಗೊಳ್ಳದೆ
ಅಧಿಕಾರಿಗಳ ಸೈಲೆಂಟ್ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಿದೆ.
ಜನರ ಗೋಳು: ತಮ್ಮ ಕುಂದುಕೊರತೆಗಳ ಅರ್ಜಿ ಹಿಡಿದು ದೂರದ ಊರುಗಳಿಂದ ಆಸೆಯಿಂದ ಬಂದಿದ್ದ ಸಾರ್ವಜನಿಕರು ಹಾಗೂ ರೈತರು, ಘಂಟೆಗಟ್ಟಲೆ ಕಾಯ್ದು ಕಾಯ್ದು ಬೇಸತ್ತು ಮನೆ ಕಡೆಗೆ ಕಾಲ್ನಡಿಗೆ ಬೆಳೆಸುವ ದುಸ್ಥಿತಿ ನಿರ್ಮಾಣವಾಗಿದೆ.
ಸಮಯ ಪಾಲನೆ ಎಲ್ಲಿ:
ಸಾರ್ವಜನಿಕರ ಸೇವೆಯೇ ಪರಮೋಚ್ಚ ಧರ್ಮ ಎಂದು ಭಾಷಣ ಬಿಗಿಯುವ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸಮಯದ ಪ್ರಜ್ಞೆಯೂ ಇಲ್ಲವೇ.
ನಿಯಮ ರೂಪಿಸುವ ಸರ್ಕಾರಿ ಅಧಿಕಾರಿಗಳೇ ಈ ರೀತಿ ಉಡಾಫೆ ತೋರಿದರೆ ಬಡಜನರ ಸಂಕಷ್ಟ ಕೇಳುವವರು ಯಾರು.
ತಕ್ಷಣದ ಎಚ್ಚರಿಕೆ:
ಈ ಕೂಡಲೇ ಸಂಬಂಧಪಟ್ಟ ಉನ್ನತಾಧಿಕಾರಿಗಳು ಹಾಗೂ ಜಿಲ್ಲಾಡಳಿತ ನಿದ್ರೆಯಿಂದ ಎದ್ದು, ನಾಗಲಮಡಿಕೆ ಹೋಬಳಿಯ ಸಭೆಗೆ ಗೈರಾದ ಮತ್ತು ವಿಳಂಬ ಧೋರಣೆ ತೋರಿದ ಅಧಿಕಾರಿಗಳ ವಿರುದ್ಧ ಖಡಕ್ ಶಿಸ್ತುಕ್ರಮ ಜರುಗಿಸಬೇಕು.
ಇಲ್ಲವಾದಲ್ಲಿ ಸಾರ್ವಜನಿಕರ ಈ ಆಕ್ರೋಶದ ಬೆಂಕಿ ಮುಂದೆ ದೊಡ್ಡ ಮಟ್ಟದ ಹೋರಾಟವಾಗಿ ಸಿಡಿಯುವುದು ಖಚಿತ!
ವರದಿ : ಶಿವಾನಂದ


