ಬಸವನಬಾಗೇವಾಡಿ : ತಾಲೂಕಿನ ಆರೂಢನಂದಿಹಾಳದ ಶ್ರೀ ಗುರು ಆರೂಢರ ಜಾತ್ರಾ ಮಹೋತ್ಸವ, ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ ಶುಕ್ರವಾರ ಅದ್ದೂರಿಯಾಗಿ ಜರುಗಿತು. ಆರೂಢರ ಐಕ್ಯ ಮಂಟಪಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ರಥಕ್ಕೆ ಪ್ರತಿಷ್ಠಾಪಿಸುವ ಕಳಸವನ್ನು ಶ್ರೀ ಮಠ ಹಾಗೂ ನಿಂಗಪ್ಪ ಮದರಿ ಅವರ ಮನೆಯಿಂದ ಗಂಗಾ ಸ್ಥಳಕ್ಕೆ ಕುಂಭ ಹಾಗೂ ಕಳಸದ ಮೆರವಣಿಗೆ ಸಕಲ ವಾದ್ಯಗಳೊಂದಿಗೆ ಕಡಕೋಳದ ರಾಜಗುರು ಮಹಾಲಿಂಗೇಶ್ವರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಶ್ರೀ ಮಠಕ್ಕೆ ಆಗಮಿಸಿತು.
ನಂತರ ಪಲ್ಲಕ್ಕಿ ಮೆರವಣಿಗೆಯು ಆರೂಢರು ತಪಸ್ಸು ಮಾಡಿದ ಕೊಂಪಿಗೆ ತಲುಪಿ ಪೂಜೆ ಸಲ್ಲಿಸಲಾಯಿತು. ಸಂಜೆ ಭವ್ಯ ರಥೋತ್ಸವ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಮಧ್ಯೆ ಕಡಕೋಳದ ರಾಜಗುರು ಮಹಾಲಿಂಗೇಶ್ವರ ಸ್ವಾಮೀಜಿ ಹಾಗೂ ಚಿಕ್ಕರೂಗಿಯ ಪ್ರವಚನಕಾರ ಈರಣ್ಣ ಶಾಸ್ತ್ರೀ ಸಾನಿಧ್ಯದಲ್ಲಿ ಜರುಗಿತು. ರಾಜ್ಯವಲ್ಲದೇ ಹೊರ ರಾಜ್ಯದಿಂದ ಆಗಮಿಸಿದ ಭಕ್ತರು ಆಗಮಿಸಿ ಆರೂಢರ ದರ್ಶನ ಪಡೆದು ಪುನೀತರಾದರು.
ವರದಿ : ಗುರುರಾಜ್. ಬ. ಕನ್ನೂರ.