ನವದೆಹಲಿ: ಸಂಸತ್ತಿನ ಮಹತ್ವದ ಬಜೆಟ್ ಅಧಿವೇಶನವು ಇಂದು (ಶನಿವಾರ) ಮುಕ್ತಾಯಗೊಂಡಿದ್ದು, ಉಭಯ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಇಂದು ರಾತ್ರಿ 8:30 ಕ್ಕೆ ದೇಶದ ಜನತೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿದೆ .
ಭಾಷಣದ ಮುಖ್ಯಾಂಶಗಳು ಏನಿರಬಹುದು?
ಮಹಿಳಾಮೀಸಲಾತಿಬಿಲ್: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿಗೆ ಸಂಬಂಧಿಸಿದ 131ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯು ವಿರೋಧ ಪಕ್ಷಗಳ ಅಸಮ್ಮತಿಯಿಂದಾಗಿ ವಿಫಲಗೊಂಡಿರುವ ಹಿನ್ನೆಲೆಯಲ್ಲಿ, ಪ್ರಧಾನಿಯವರು ಈ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವ ಸಾಧ್ಯತೆಯಿದೆ.
ಪಶ್ಚಿಮ. ಏಷ್ಯಾ ಬಿಕ್ಕಟ್ಟು: ಜಾಗತಿಕವಾಗಿ ನಡೆಯುತ್ತಿರುವ ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ಅದರಿಂದ ಭಾರತದ ಇಂಧನ ಅಗತ್ಯತೆಗಳ ಮೇಲಾಗುತ್ತಿರುವ ಪರಿಣಾಮಗಳ ಕುರಿತು ಪ್ರಧಾನಿ ಮಾತನಾಡಬಹುದು ಎನ್ನಲಾಗಿದೆ.
ಆರ್ಥಿಕ ನಿರ್ಧಾರಗಳು: ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಶೇ. 2 ರಷ್ಟುತುಟ್ಟಿಭತ್ಯೆ (DA) ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದ್ದು, ಈ ಕುರಿತು ಅಥವಾ ಎಂಟನೇ ವೇತನ ಆಯೋಗದ ಮುನ್ಸೂಚನೆಗಳ ಬಗ್ಗೆಯೂ ಮಾಹಿತಿ ನೀಡುವ ಸಾಧ್ಯತೆಯಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸಲು ನಿರಾಕರಿಸುವ ಮೂಲಕ ವಿರೋಧ ಪಕ್ಷಗಳು ಮಹಿಳೆಯರ ವಿರುದ್ಧ ನಡೆದುಕೊಳ್ಳುತ್ತಿವೆ ಮತ್ತು ಅವರು ಈ ವಿಷಯದಲ್ಲಿ “ಅಪರಾಧಿಗಳು” ಎಂದು ಪ್ರಧಾನಿ ಆರೋಪಿಸಿದ್ದಾರೆ.




