ಸಿರುಗುಪ್ಪ : ನಗರದ ತುಂಗಾಭದ್ರ ನದಿತೀರದಲ್ಲಿನ ಗ್ರಾಮದೇವತೆ ಎಂದೇ ಪ್ರಸಿದ್ದಿಯಾಗಿರುವ ಶ್ರೀ ಗಾಂಧಮ್ಮ ದೇವಿಯ ವಿವಿಧ ಫಲ ಪುಷ್ಪಗಳಿಂದ ಅಲಂಕೃತಗೊಂಡ ರಥೋತ್ಸವ ವೈಭವಯುತವಾಗಿ ಜರುಗಿತು.
ಜಾತ್ರಾ ನಿಮಿತ್ತ ದೇವಸ್ಥಾನದಲ್ಲಿ ಶ್ರೀದೇವಿಗೆ ಮಹಾರುದ್ರಾಭಿಷೇಕ, ವಿವಿಧ ಫಲಪುಷ್ಪಗಳು, ಆಭರಣಗಳಿಂದ ಅಲಂಕರಿಸಿ ಮಹಾಮಂಗಳಾರತಿ ಸಲ್ಲಿಸಿ ಪೂಜೆ ಸಲ್ಲಿಸಲಾಯಿತು. ಭಕ್ತರಿಗೆ ವಿಶೇಷ ದರ್ಶನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ನಂತರ ಉತ್ಸವ ಮೂರ್ತಿಯೊಂದಿಗೆ ಆರ್ಚಕರು ಅಗ್ನಿಕುಂಡ ಪ್ರವೇಶದೊಂದಿಗೆ ನೂರಾರು ಅಗ್ನಿಕುಂಡವನ್ನು ಹಾಯ್ದು ತಮ್ಮ ಹರಕೆಯನ್ನು ತೀರಿಸಿದರು.
ಪಲ್ಲಕ್ಕಿ ಸೇವೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದ್ದು, ದೇವಸ್ಥಾನವು ಬಾಳೆಕಂಬ, ಮಾವಿನ ತೋರಣಗಳಿಂದ, ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿತ್ತು.
ಭಕ್ತರು ವಿವಿಧ ವಾದ್ಯಗಳ ಮೂಲಕ ಬೃಹತ್ ಹೂವಿನ ಹಾರಗಳನ್ನು ಮೆರವಣಿಗೆ ಮೂಲಕ ತಂದು ರಥಕ್ಕೆ ಅರ್ಪಿಸುತ್ತಿರುವ ದೃಶ್ಯ ಕಂಡುಬಂದಿತು.
ಪ್ರತಿವರ್ಷ ಭಾರತ ಹುಣ್ಣಿಮೆಯಂದು ಜರುಗುವ ರಥೋತ್ಸವಕ್ಕೆ ನಗರ ಹಾಗೂ ದೇಶನೂರು, ಗಡ್ಡೆ ವಿರುಪಾಪುರ, ಇಬ್ರಾಹಿಂಪುರ, ದೇವಲಾಪುರ, ಕೆಂಚನಗುಡ್ಡ ಇನ್ನಿತರ ಗ್ರಾಮಗಳಿಂದ ಆಗಮಿಸಿದ ಭಕ್ತರು ರಥಕ್ಕೆ ಕಾಯಿ ಕರ್ಪೂರ, ನೈವೇದ್ಯ ಸಮರ್ಪಿಸಿ ಹೂಹಣ್ಣು ಎಸೆದು ಭಕ್ತಿಯಿಂದ ನಮಿಸಿದರು.
ವರದಿ : ಶ್ರೀನಿವಾಸ ನಾಯ್ಕ