ಬಳ್ಳಾರಿ : ಪಹಲ್ಗಾಂ ನರಮೇಧ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮುಂದುವರೆದಿದೆ. ಕಾಂಗ್ರೆಸ್ ಸರ್ಕಾರದ ಎರಡು ವರ್ಷಗಳ ಸಾಧನಾ ಮತ್ತು ಜನತಾ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಮೋದಿ ಸರ್ಕಾರ ಭದ್ರತೆ ಕೊಡದ ಕಾರಣಕ್ಕೆ 26 ಜನರ ಕೊಲೆಯಾಗಿದೆ.ಸರ್ಕಾರ, ಮಿಲಿಟರಿ ಯಾರೂ ಜನರಿಗೆ ಸಹಕಾರ ಕೊಟ್ಟಿಲ್ಲ’ ಎಂದು ಖರ್ಗೆ ಆರೋಪಿಸಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 17ರಂದು ಕಾಶ್ಮೀರಕ್ಕೆ ಹೋಗುವವರಿದ್ರು. ಆದರೆ ಬೇಹುಗಾರಿಕೆ, ಗುಪ್ತಚರ ದಳದವರು ಹೋಗಬೇಡಿ ಎಂದಿದ್ದರು. ಅದೇ ಕಾರಣಕ್ಕೆ ಮೋದಿ ಕಾಶ್ಮೀರ ಪ್ರವಾಸ ರದ್ದು ಮಾಡಿಸಿದ್ರು.
ಇದೆಲ್ಲಾ ಮೋದಿಗೆ ಗೊತ್ತಿತ್ತು, ಹಾಗಿದ್ದರೂ ಯಾಕೆ ಹೇಳಲಿಲ್ಲ. ಮೋದಿ ಅಂದೇ ಹೇಳಿದ್ದರೆ 26 ಪ್ರಾಣ ಉಳಿಯುತ್ತಿದ್ದವು’ ಎಂದು ಪ್ರಧಾನಿಗೆ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಮಾಡಿದ್ದಾರೆ.
‘ಪಾಕಿಸ್ತಾನದ ಕೆಲಸ ಯಾವಾಗಲೂ ನಮ್ಮ ದೇಶದ ಮೇಲೆ ಗೂಬೆ ಕೂಡಿಸೋದು. ಪಾಕಿಸ್ತಾನಕ್ಕೆ ಶಕ್ತಿ ಇಲ್ಲ. ಹೀಗಾಗಿ ಭಯೋತ್ಪಾದಕರಿಂದ ದಾಳಿ ಮಾಡಿಸುತ್ತಿದೆ. ನಾವು ಸರ್ಕಾರಕ್ಕೆ ಬೆಂಬಲ ನೀಡಿದ್ದೇವೆ. ನಾವೆಲ್ಲಾ ನಿಂತು ಕೆಲಸ ಮಾಡೋಣ ಎಂದು ಹೇಳಿದ್ದೆ’ ಎಂದು ಖರ್ಗೆ ಹೇಳಿದ್ದಾರೆ.