ಮಹಾಕುಂಭ ಮೇಳ : ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಕಾಲಿಡಲು ಜಾಗವಿಲ್ಲದೆ ಪ್ರಯಾಣಿಕರು ಎಂಜಿನ್ ಬೋಗಿಗೆ ನುಗ್ಗಿದ ಘಟನೆ ವಾರಣಾಸಿಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ರೈಲ್ವೆ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ದೇಶದಲ್ಲೆಡೆಯಿಂದ ಭಕ್ತರು ಆಗಮಿಸಿ ಗಂಗೆ ಹಾಗೂ ತ್ರಿವೇಣಿ ಸಂಗಮದಲ್ಲಿ ಮುಳುಗಿ ಪುಣ್ಯಸ್ನಾನ ಮಾಡುತ್ತಿರುವುದು ಗೊತ್ತೆ ಇದೆ. ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ವಿಶ್ವದ ಅತೀ ದೊಡ್ಡ ಧಾರ್ಮಿಕ ಸಮಾಗಮವಾದ ಈ ಕುಂಭಮೇಳದಲ್ಲಿ ಭಾಗವಹಿಸಿ ಪುಣ್ಯಸ್ನಾನ ಮಾಡಲು ಭಕ್ತರು ಕಿಲೋ ಮೀಟರ್ಗಳ ದೂರ ನಡೆದು ಬಸ್ ಲಾರಿ ಕಾರು ರೈಲು ವಿಮಾನಗಳಲ್ಲಿ ಪ್ರಯಾಣಿಸಿ ಈ ಪುಣ್ಯ ಸ್ಥಳಕ್ಕೆ ಬರುತ್ತಿದ್ದಾರೆ. ಇದರಿಂದ ದೇಶದ ಮೂಲೆ ಮೂಲೆಯಿಂದ ಪ್ರಯಾಗ್ರಾಜ್ಗೆ ಹೋಗುವ ರೈಲುಗಳು ತುಂಬಿ ತುಳುಕುತ್ತಿದ್ದು, ಕಾಲಿಡಲು ಜಾಗವಿಲ್ಲದಂತಾಗಿದೆ. ಹೀಗಿರುವಾಗ ವಾರಣಾಸಿಯಿಂದ ಪ್ರಯಾಗ್ರಾಜ್ಗೆ ಹೊರಟ್ಟಿದ್ದ ರೈಲೊಂದರಲ್ಲಿ ಕಾಲಿಡಲು ಕೂಡ ಜಾಗವಿಲ್ಲದಂತೆ ಜನ ತುಂಬಿಕೊಂಡಿದ್ದು, ಇದರಿಂದ ರೈಲು ಏರಲಾಗದೇ ಬಾಕಿಯಾದ ಕೆಲ ಪ್ರಯಾಣಿಕರು ಲೋಕೋ ಪೈಲಟ್ ಕೂರುವಂತಹ ರೈಲಿನ ಎಂಜಿನ್ ಇರುವ ಬೋಗಿಯ ಒಳನುಗ್ಗಿದ್ದ ಘಟನೆ ನಡೆದಿದೆ. ಜನರ ಈ ಕಿತಾಪತಿಯಿಂದಾಗಿ ರೈಲಿನ ಲೋಕೋ ಪೈಲಟ್ಗೆ ರೈಲೇರಲು ಸಾಧ್ಯವಾಗದಂತೆ ಆಗಿತ್ತು.
ನಂತರ ರೈಲ್ವೆ ಪೊಲೀಸರು ಮಧ್ಯ ಪ್ರವೇಶಿಸಿ ರೈಲಿನ ಎಂಜಿನ್ ಇದ್ದ ಜಾಗಕ್ಕೇರಿದ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ವಾರಣಾಸಿ ಜಂಕ್ಷನ್ ಅಂದ್ರೆ ವಾರಣಾಸಿ ಕಂಟೋನ್ಮೆಂಟ್ ಸ್ಟೇಷನ್ನಲ್ಲಿ ಈ ಘಟನೆ ನಡೆದಿದೆ. ಮಹಾಕುಂಭಕ್ಕೆ ಹೋಗುವ ಭಕ್ತರಿಗಾಗಿ ಈ ವಿಶೇಷ ರೈಲನ್ನು ನಿಯೋಜನೆ ಮಾಡಲಾಗಿತ್ತು. ಆದರೆ ಜನ ತುಂಬಿ ತುಳುಕಿದ್ದರಿಂದ ಲೋಕೋ ಪೈಲಟ್ ಕೂರಬಹುದಾದ ಜಾಗ ಮಾತ್ರ ಖಾಲಿ ಇತ್ತು. ಹೀಗಾಗಿ ರೈಲು ಏರಲು ಸಾಧ್ಯವಾಗದ ಜನ ಇಂಜಿನ್ ಇರುವಂತಹ ಲೋಕೋ ಪೈಲಟ್ ಕ್ಯಾಬಿನ್ಗೂ ನುಗ್ಗಿದ್ದಾರೆ.
ಈ ಘಟನೆಯ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಫೋನ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 12ಕ್ಕೂ ಹೆಚ್ಚು ಜನ ಲೋಕೋ ಪೈಲಟ್ ಕೂರುವ ಕ್ಯಾಬಿನ್ಗೆ ನುಗ್ಗುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಬೇಡಿಕೆಗೆ ತಕ್ಕಂತೆ ರೈಲುಗಳ ಸಂಖ್ಯೆ ಹೆಚ್ಚಳ ಮಾಡಬೇಕಿತ್ತು, ಛತ್ ಪೂಜೆ ಮುಂತಾದ ಸಂದರ್ಭಗಳಲ್ಲಿ ಭಾರಿ ಜನದಟ್ಟಣೆ ಇದ್ದು, ರೈಲಿನಲ್ಲಿ ಕಾಲಿಡಲು ಜಾಗ ಇರುವುದಿಲ್ಲ, ರೈಲ್ವೆಯೂ ಈ ರೀತಿ ತನ್ನ ಮಿತಿಯನ್ನು ಮೀರಿ ಟಿಕೆಟ್ ಸೇಲ್ ಮಾಡುವುದನ್ನು ನಿಲ್ಲಿಸಬೇಕು ಎಂದು ಒಬ್ಬರು ಆಗ್ರಹಿಸಿದ್ದಾರೆ.
ಈ ಜನರಿಗೆ ರೈಲಿನಲ್ಲಿ ಸ್ಥಳಾವಕಾಶ ಕಲ್ಪಿಸಲು ಸಾಧ್ಯವಾಗದಿದ್ದರೆ, ರೈಲ್ವೆಗಳು ಟಿಕೆಟ್ಗಳನ್ನು ಅತಿಯಾಗಿ ಮಾರಾಟ ಮಾಡುವುದನ್ನು ನಿಲ್ಲಿಸಬೇಕು ಮತ್ತು ಸ್ಪಷ್ಟ ಬೇಡಿಕೆ ನೋಡಿ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಜನರ ಈ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಗರಿಕರಾಗಿ ನಾವು ಕೂಡ ಸ್ವಲ್ಪ ಜವಾಬ್ದಾರಿಯನ್ನು ತೆಗೆದುಕೊಂಡು ಅಂತಹ ಕೃತ್ಯಗಳನ್ನು ಮಾಡದಿರುವ ಸಮಯ ಇದು. ನಾವು ಹಿಂದೂಗಳು ನಮ್ಮ ಬಟ್ಟೆಗಳನ್ನು ಬಿಟ್ಟು ಕುಂಭಕ್ಕೆ ಹೋಗುತ್ತಿದ್ದೇವೆ. ಏಕೆ? ಏಕೆಂದರೆ ಅವು ಒದ್ದೆಯಾಗಿವೆ. ಇದು ಪ್ರವಾಸಿ ಆಕರ್ಷಣೆಯಲ್ಲ,ಇದು ಆಧ್ಯಾತ್ಮಿಕ ಪ್ರಯಾಣ. ಪ್ರಯಾಣಕ್ಕೆ ಅರ್ಹವಾದ ಗೌರವವನ್ನು ನೀಡಿ, ಎಲ್ಲರಿಗೂ ಮನವಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.