ಕೊಪ್ಪಳ : ರೈಲ್ವೆ ಯೋಜನೆಗಳನ್ನು ಪ್ರತಿ ಹಳ್ಳಿಗೂ ತಲುಪಿಸುವ ಚಿಂತನೆ ನಮ್ಮ ಸರ್ಕಾರದ್ದಾಗಿದೆ. ಅದಕ್ಕಾಗಿ ಪ್ರಧಾನ ಮಂತ್ರಿಗಳು ದೇಶದಲ್ಲಿ 7 ಲಕ್ಷ ಕೋಟಿ ರೂ ಹಳೆಯ ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಭಾರತ ಸರ್ಕಾರದ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಹೇಳಿದರು.
ಅವರು ಗುರುವಾರ ಕುಷ್ಟಗಿ ರೈಲು ನಿಲ್ದಾಣದಲ್ಲಿ ನೈಋತ್ಯ ರೈಲ್ವೆ ವಿಭಾಗದ ಗದಗ (ತಳಕಲ್ಲ) ಕುಷ್ಟಗಿ ಹೊಸ ರೈಲು ಮಾರ್ಗದ ಉದ್ಘಾಟನೆ ಹಾಗೂ ರೈಲು ಸಂಖ್ಯೆ. 17323 ಕುಷ್ಟಗಿ-ಎಸ್.ಎಸ್.ಎಸ್. ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಹಸಿರು ನಿಶಾನೆ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.
ರೈಲ್ವೆ ಸಾರಿಗೆಯಿಂದ ಜನರಿಗೆ ಅನುಕೂಲವಾಗಲಿದೆ. ರೈಲು ಒಂದು ಇಂಥ ಇಲಾಖೆ ಇದೆ ಇದರಲ್ಲಿ ಎಲ್ಲರೂ ಓಡಾಡುತ್ತಾರೆ. ದೇವೆಗೌಡರು ಪ್ರಧಾನಿಗಳಾಗಿದ್ದ ಸಮಯದಲ್ಲಿ ಬಸವರಾಜ ರಾಯರೆಡ್ಡಿ ಅವರು ಈ ಭಾಗದ ಸಂಸದರಾಗಿದ್ದ ಸಮಯದಲ್ಲಿ ಗದಗ-ವಾಡಿ ರೈಲು ಮಾರ್ಗದ ಯೋಜನೆ ಕೈಗೆತ್ತಿಕೊಂಡಿದ್ದರು. ಬಹು ದಿನಗಳ ನಂತರ ಈ ಭಾಗದ ಜನರ ಕನಸು ಈಗ ನನಸಾಗಿದೆ ಎಂದರು.
ವಾಜಪೇಯಿ ಅವರು ಪ್ರಧಾನಿಗಳಾಗಿದ್ದ ಸಮಯದಲ್ಲಿ ಅವರು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಒತ್ತು ನೀಡಿದರೆ ನರೇಂದ್ರ ಮೋದಿಜಿ ಅವರು ರೈಲ್ವೆ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ 45 ಸಾವಿರ ಕೋಟಿ ರೂ ರೈಲ್ವೆ ಯೋಜನೆಯನ್ನು ಕರ್ನಾಟಕದಲ್ಲಿ ಮಾಡುತ್ತಿದ್ದೆವೆ. 2014 ರಿಂದ 2024 ರವರೆಗೆ 5 ಲಕ್ಷ ಉದ್ಯೋಗ ರೈಲ್ವೆ ಇಲಾಖೆಯಲ್ಲಿ ಜನರಿಗೆ ನೀಡಲಾಗಿದೆ.
ರೈಲ್ವೆ ಇಲಾಖೆಯಲ್ಲಿ ಕರ್ನಾಟಕದವರಿಗೆ ಉದ್ಯೋಗ ಸಿಗಲು ಅನುಕೂಲವಾಗಲು ಕನ್ನಡದಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ. ಒಂದೇ ಭಾರತ 50 ಎಸಿ ಸ್ಲೀಪರ್ ಕೋಚ್ ಟ್ರೈನಗಳನ್ನು ಇನ್ನೂ ಒಂದುವರೆ ತಿಂಗಳಲ್ಲಿ ದೇಶದಲ್ಲಿ ಬಿಡುಗಡೆ ಮಾಡಲಿದ್ದೆವೆ ಎಂದು ಹೇಳಿದರು.
2025-26ನೇ ಸಾಲಿನಲ್ಲಿ ಗದಗ-ವಾಡಿ ರೈಲು ಯೋಜನೆಗೆ 549.45 ಕೋಟಿ ರೂ ಹಣವನ್ನು ಇರಿಸಿದ್ದೆವೆ. ಗದಗ-ವಾಡಿ ಮಧ್ಯ ಒಟ್ಟು 27 ರೈಲು ನಿಲ್ದಾಣಗಳು ಬರುತ್ತವೆ. ಎಲ್ಲಾ ರೈಲು ನಿಲ್ದಾಣಗಳ ಅಭಿವೃದ್ಧಿಗೆ ನಮ್ಮ ಸರ್ಕಾರದ ಆದ್ಯತೆ ನೀಡಿದೆ.
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ್ದು, ಪ್ರತಿದಿನ ಕುಷ್ಟಗಿ-ಹುಬ್ಬಳ್ಳಿ ಮಧ್ಯ ಈ ರೈಲು ಸಂಚರಿಸಲಿದೆ. ಟಿಕೆಟ್ ದರ 70 ರೂ ಇದ್ದು.
ಬೆಳಿಗ್ಗೆ 7 ಗಂಟೆಗೆ ಕುಷ್ಟಗಿಯಿಂದ ಹೊರಟ ರೈಲು 10.40ಕ್ಕೆ ಹುಬ್ಬಳ್ಳಿ ತಲುಪಲಿದೆ ಮತ್ತೆ ಸಂಜೆ 5 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 8.30 ಕುಷ್ಟಗಿ ಬಂದು ತಲುಪಲಿದೆ ಇದರಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.