ಪರಿಸರಕ್ಕೆ ಧಕ್ಕೆ ಮಾಡುವ ಮನುಷ್ಯನಿಗೆ ಇದು ಮಾನವ ಕುಲದ ಬೆಳವಣಿಗೆಗೆ ಧಕ್ಕೆ ಎಂಬ ಅರಿವು ಮೂಡಿಸಿದರೆ ಮಾತ್ರ ಬದಲಾವಣೆ ಸಾಧ್ಯ. ಕಳೆದ 44 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದಕ್ಕಾಗಿ ಜನಜಾಗೃತಿ ಮೂಡಿಸುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕೃಷಿ ಮೇಲ್ವಿಚಾರಕ ವೀರೇಶ್ ಹೇಳಿದರು.
ಸರಕಾರಿ ಆದರ್ಶ ವಿದ್ಯಾಲಯದಲ್ಲಿ ಸೋಮವಾರದಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬೀವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಗಿಡ ನಾಟಿ ಮತ್ತು ಪರಿಸರ ಮಾಹಿತಿ ಕಾರ್ಯಕ್ರಮದಲ್ಲಿ ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿದ್ಯಾರ್ಥಿಗಳಿಗೆ ಪರಿಸರದ ಕುರಿತು ಮತ್ತು ಧರ್ಮಸ್ಥಳ ಸಂಸ್ಥೆ ಇಡೀ ರಾಜ್ಯದಲ್ಲಿ ಕೆರೆಗಳ ಹೂಳೆತ್ತುವುದು, ಕೃಷಿ ಅಭಿವೃದ್ಧಿ ಪಡಿಸುವುದು, ಪರಿಸರ ಸಂರಕ್ಷಿಸುವುದು, ದೇವಸ್ಥಾನಗಳ ಜೀರ್ಣೋದ್ಧಾರ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯದಲ್ಲಿ ಮುಂದಿದೆ.
ಸರ್ಕಾರದ ಜೊತೆಗೆ ಸಂಸ್ಥೆಯು ಒಂದು ಭಾಗವಾಗಿ ಜನಹಿತಕ್ಕೆ ಮುಂದಾಗಿದೆ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಕೃಷಿಕರನ್ನೊಳಗೊಂಡ ಇಂತಹ ಜಾಗೃತಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗುತ್ತಿದೆ. ಒಂದು ಊರಿನ ಸೊಗಸು ಆ ಊರಿನ ದೇವಸ್ಥಾನ, ಕೆರೆ, ಶಾಲೆ, ಆಸ್ಪತ್ರೆಗಳ ಸುವ್ಯವಸ್ಥೆಯನ್ನು ಅವಲಂಬಿಸಿದೆ.
ಇದೆಲ್ಲದರಲ್ಲಿ ಸಾರ್ವಜನಿಕರ ಪಾತ್ರ ಬಹು ಮುಖ್ಯವಾದದು ಎಂದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾದ ನಾರಾಯಣ ನಾಯ್ಕ್, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಮಂಜುನಾಥ, ಶಾಲೆಯ ಶಿಕ್ಷಕರಾದ ಉಮಾದೇವಿ, ಮಲವಿ ಆನಂದ, ಶಿಕ್ಷಕರು, ಶಾಲಾ ಮಕ್ಕಳು ಉಪಸ್ಥಿತರಿದ್ದರು.
ವರದಿ: ಶ್ರೀನಿವಾಸ ನಾಯ್ಕ




