ಬೆಳಗಾವಿ: ಇಲ್ಲಿನ ಶಾಹೂ ನಗರದ ವೃದ್ಧಾಶ್ರಮದಲ್ಲಿ ಅಂಜನಾ ಧಾಮನೆ (66) ಎನ್ನುವವರು ಸೋಮವಾರ ನಿಧನರಾದರು. ಅವರಿಗೆ ಇರುವ ಇಬ್ಬರು ಗಂಡು ಮಕ್ಕಳು ಶವ ಸಂಸ್ಕಾರಕ್ಕೂ ಬರಲಿಲ್ಲ. ಮೂವರು ಸಮಾಜ ಸೇವಕರೇ ವೃದ್ಧೆ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದರು.
ತಾಲ್ಲೂಕಿನ ಮಾರಿಹಾಳ ಗ್ರಾಮದ ಅಂಜನಾ ಅವರಿಗೆ ಮಕ್ಕಳಿದ್ದರೂ ನೋಡಿಕೊಳ್ಳದೇ ಕೆಲವು ವರ್ಷಗಳ ಹಿಂದೆ ವೃದ್ಧಾಶ್ರಮ ಸೇರಿಸಿದ್ದರು.
ಕೆಲ ತಿಂಗಳಿಂದ ಅವರು ವಯೋಸಹಜ ಕಾಯಿಲೆಗೆ ಒಳಗಾದರು. ಮಾಹಿತಿ ನೀಡಿದರೂ ಮಕ್ಕಳು ತಾಯಿಯ ಆರೈಕೆಗೆ ಬರಲಿಲ್ಲ. ಭಾನುವಾರ ಅವರು ನಿಧನರಾದ ಬಳಿಕವೂ ಮಕ್ಕಳಿಗೆ ವಿಷಯ ಮುಟ್ಟಿಸಲಾಯಿತು. ನೀವೇ ಶವಸಂಸ್ಕಾರ ಮಾಡಿ ಎಂಬ ಉತ್ತರ ಮಕ್ಕಳಿಂದ ಬಂದು ಎಂದು ಅನಾಥಾಶ್ರಮದ ಸಿಬ್ಬಂದಿ ತಿಳಿಸಿದರು.
ಸ್ಥಳಕ್ಕೆ ಬಂದ ಮಹಾನಗರ ಪಾಲಿಕೆ ಸದಸ್ಯ ಶಂಕರ ಪಾಟೀಲ ಹಾಗೂ ಸಮಾಜಸೇವಕ ಗಂಗಾಧರ ಪಾಟೀಲ ವೃದ್ಧೆಯ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡರು. ಇವರಿಗೆ ನಿಖಿಲ್ ಅಪ್ಪುಗೋಳ, ಸ್ಮಶಾನ ಭೂಮಿ ಸಿಬ್ಬಂದಿ ನಿಸ್ಸಾರ ಅವರು ಸಾಥ್ ನೀಡಿದರು. ಆಂಬುಲೆನ್ಸ್ ಮೂಲಕ ಶವ ಸಾಗಿಸಿ, ಸದಾಶಿವ ನಗರದ ರುದ್ರಭೂಮಿಯಲ್ಲಿ ಅಗ್ನಿಸ್ಪರ್ಶ ಮಾಡಿದರು.




