ಸಿಂಧನೂರು : ನಗರದ ಕೋಟೆ ಈರಣ್ಣ ದೇವಸ್ಥಾನದಿಂದ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪಾದಯಾತ್ರೆ ಭವ್ಯವಾಗಿ ಆರಂಭಗೊಂಡಿದೆ. ಕೋಟೆ ಈರಣ್ಣ ದೇವಸ್ಥಾನದ ಆವರಣದಲ್ಲೇ ಸಾವಿರಾರು ರೈತರು ಹಾಗೂ ಕಾರ್ಯಕರ್ತರು ಜಮಾಯಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು, ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಮತ್ತು ಶಾಸಕಾಂಗ ನಾಯಕ ಸುರೇಶ್ ಬಾಬು, ದೇವದುರ್ಗ ಶಾಸಕಿ ಕರೆಮ್ಮ ಜಿ ನಾಯಕ್, ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರ್ ಸೇರಿದಂತೆ ಮಾಜಿ ಸಚಿವರು ಮತ್ತು ಅನೇಕ ಶಾಸಕರು ಭಾರಿ ಬೆಂಬಲ ನೀಡಿದ್ದಾರೆ.
ಕೋಟೆ ಈರಣ್ಣ ದೇವಸ್ಥಾನದಿಂದ ಎ.ಪಿ.ಎಂ.ಸಿ ಮಾರುಕಟ್ಟೆಯವರೆಗೆ ಸುಮಾರು ಮೂರು ಕಿಲೋಮೀಟರ್ ಪಾದಯಾತ್ರೆಯನ್ನು ನಿಖಿಲ್ ಕುಮಾರಸ್ವಾಮಿ ಮುನ್ನಡೆಸಿದ್ದು, ಮಾರ್ಗಮಧ್ಯೆ ರೈತರು ಸರ್ಕಾರದಿಂದ ತಮ್ಮ ಬೇಡಿಕೆಗಳಿಗೆ ತಕ್ಷಣ ಸ್ಪಂದನೆ ನೀಡಬೇಕೆಂದು ಘೋಷಣೆಗಳನ್ನು ಕೂಗಿದರು. ಎ.ಪಿ.ಎಂ.ಸಿ ಆವರಣದ ಬಳಿ ಈ ಸಂದರ್ಭಕ್ಕಾಗಿ ವಿಶೇಷವಾಗಿ ಬೃಹತ್ ವೇದಿಕೆ ನಿರ್ಮಿಸಲಾಗಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಸಾವಿರಾರು ರೈತರು ಸಮಾವೇಶದಲ್ಲಿ ಭಾಗವಹಿಸಿದ್ದಾರೆ.
ರೈತರು ತುಂಗಭದ್ರಾ ಜಲಾಶಯದಲ್ಲಿ ಕ್ರಸ್ಟ್ ಗೇಟ್ಗಳ ಅಳವಡಿಕೆಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದು, ಎರಡನೇ ಬೆಳೆಗೆ ನೀರನ್ನು ಬಿಡುಗಡೆ ಮಾಡಬೇಕು ಅಥವಾ ನೀರು ಸಿಗದಿದ್ದಲ್ಲಿ ಪ್ರತಿ ಎಕರೆಗೆ 50,000 ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹ ವ್ಯಕ್ತಪಡಿಸಿದ್ದಾರೆ.
ವರದಿ : ಗಾರಲದಿನ್ನಿ ವೀರನಗೌಡ




