——————————ಅಂದ್ರಹಳ್ಳಿ ವಿದ್ಯಾ ಭೂಷಣ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ
ಬೆಂಗಳೂರು: ಅಂದ್ರಹಳ್ಳಿಯ ವಿದ್ಯಾ ಭೂಷಣ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಬ್ಯಾಡರಹಳ್ಳಿ ಕ್ಲಸ್ಟರ್ ಮಟ್ಟದ 2025-26ನೇ ಸಾಲಿನ ಪ್ರತಿಭಾ ಕಾರಂಜಿ ಕಲೋತ್ಸವ ಮತ್ತು ಆಯುಷ್ಮನ ಕಾರ್ಡ್ ನೊಂದಾಯಿಣಿ, ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ವಿದ್ಯಾ ಭೂಷಣ್ ಇಂಟರ್ ನ್ಯಾಷನಲ್ ಸ್ಕೂಲ್ ಸಂಸ್ಥಾಪಕ ಅಧ್ಯಕ್ಷ ಬಾ. ನ. ರವಿ ಅವರ ಧರ್ಮಪತ್ನಿ ಶ್ರೀಮತಿ ಪಾರ್ವತಿ ರವಿ ಮತ್ತು ಬೆಂಗಳೂರು ನಗರ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಇವರ ಸಂಯುಕ್ತ ಆಶ್ರಯದಲ್ಲಿ ಅದ್ದೂರಿಯಾಗಿ ಜರುಗಿತು.

ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಧನಲಕ್ಷ್ಮಿ ಮಾತನಾಡಿ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಇಂತಹ ವೇದಿಕೆ ಅತ್ಯಂತ ಅಗತ್ಯ. ಪ್ರತಿಭೆ ಪೋಷಣೆ ಮತ್ತು ಪ್ರೋತ್ಸಾಹ ಶಿಕ್ಷಣದ ಮುಖ್ಯ ಅಂಶ. ಪ್ರತಿಭಾ ಕಾರಂಜಿ ಕೇವಲ ಸ್ಪರ್ಧೆ ಅಲ್ಲ ಇದು ಮಕ್ಕಳ ಕನಸುಗಳಿಗೆ ಬಾಗಿಲು ತೆರೆಸುವ ವೇದಿಕೆ. ಗೆಲುವು ಸೋಲುಗಳಿಗಿಂತ ಪಾಲ್ಗೊಳ್ಳುವ ಧೈರ್ಯವೇ ದೊಡ್ಡದು ಎಂದು ಮಕ್ಕಳನ್ನು ಪ್ರೋತ್ಸಾಹಿಸಿದರು ಎಂದರು.
ಅರೆಶಂಕರ್ ಮಠದ ಶ್ರೀ ಸಿದ್ದರಾಮ ಚೈತನ್ಯ ಮಹಾ ಸ್ವಾಮಿಗಳು ಕುಣಿಗಲ್ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಬಾಲ ಮನಸ್ಸಿನಲ್ಲಿ ಬಿತ್ತುವ ಮೌಲ್ಯಗಳು ಭವಿಷ್ಯದ ವ್ಯಕ್ತಿತ್ವವನ್ನು ರೂಪಿಸುತ್ತವೆ. ಮನೆ, ಶಾಲೆ ಹಾಗೂ ಸಮಾಜ ಈ ಮೂರು ವಲಯಗಳು ಒಟ್ಟಿಗೆ ನಿಂತಾಗ ಶಿಷ್ಟಾಚಾರ, ಸಹಾನುಭೂತಿ, ನೈತಿಕತೆ ಮತ್ತು ಭಾರತೀಯ ಸಂಸ್ಕೃತಿ ಮಕ್ಕಳಲ್ಲಿ ಬೇರೂರುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಮನೆಯಿಂದಲೇ ಸಂಸ್ಕಾರ ಸಂಸ್ಕೃತಿ ಬೆಳೆಸುವುದು ಇಂದಿನ ಸಮಾಜದ ಅತ್ಯಂತ ಅಗತ್ಯ ಎಂದರು.
ಮಾಜಿ ಸಚಿವ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಮಾತನಾಡಿ ಪ್ರತಿಭಾ ಕಾರಂಜಿ ಕಲೋತ್ಸವಕ್ಕೆ ನನ್ನ ಕ್ಷೇತ್ರದಲ್ಲಿ ಇಂತಹ ಕಾರ್ಯಕ್ರಮಗಳಿಗೆ ಸಹಾಯ ಸಹಕಾರ ನೀಡಿದ್ದೇನೆ ಎಂದರು.
ಕುಣಿಗಲ್ ಶಾಸಕ ಡಾ. ಹೆಚ್.ಡಿ ರಂಗನಾಥ್ ಈ ವಿದ್ಯಾ ಭೂಷಣ್ ಇಂಟರ್ ನ್ಯಾಷನಲ್ ಸ್ಕೂಲ್ ಹತ್ತು ವರ್ಷಗಳ ಕಾಲ ನಿರಂತರವಾಗಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಶಿಕ್ಷಣ ನೀಡುವ ಕೆಲಸ ಸುಲಭವಲ್ಲ ಆದರೆ ನಮ್ಮ ರವಿ ಮತ್ತು ಅವರ ಪತ್ನಿ ಪಾರ್ವತಿ ಇಬ್ಬರ ಶ್ರಮ ಶ್ಲಾಘನೀಯ ಎಂದರು. ವಿದ್ಯಾ ಭೂಷಣ್ ಇಂಟರ್ ನ್ಯಾಷನಲ್ ಸ್ಕೂಲ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಗ್ರೇಟರ್ ಬೆಂಗಳೂರು ಪ್ರಭಲ ಆಕಾಂಕ್ಷಿ ಅಭ್ಯರ್ಥಿ ಬಾ ನ ರವಿ ಸರ್ವರಿಗೂ ಸ್ವಾಗತಿಸಿದರು.
ವಿವಿಧ ಶಾಲೆಗಳ ವಿದ್ಯಾರ್ಥಿಗಳ ಕಲೆ, ಸಾಂಸ್ಕೃತಿಕ ಸಾಮರ್ಥ್ಯಗಳನ್ನು ವೇದಿಕೆಗೆ ತಂದು ಮಕ್ಕಳ ಸೃಜನಶೀಲತೆಯ ಜಾತ್ರೆಯಾಗಿದ್ದ ಪ್ರತಿಭಾ ಕಾರಂಜಿ ಸಂಭ್ರಮಭರಿತ ವಾತಾವರಣದಲ್ಲಿ ಜರುಗಿತು. ಶಾಲಾ ಮಟ್ಟದಲ್ಲಿ ಅರಳಿರುವ ಬಾಲ ಪ್ರತಿಭೆಗಳ ಸಡಗರಕ್ಕೆ ಸಾಕ್ಷಿಯಾದ ಈ ಕಾರ್ಯಕ್ರಮ ಬಣ್ಣಗಳ ಕಳೆ, ಸಂಗೀತದ ಮಧುರತೆ ಮತ್ತು ಕಲಾತ್ಮಕ ಪ್ರದರ್ಶನಗಳ ರಸಭರಿತ ಮತ್ತು ನೃತ್ಯ, ಚಿತ್ರಕಲೆ, ಕಂಠಪಾಠ, ಭಾಷಣ, ಛದ್ಮವೇಷ, ಕಥೆ ಹೇಳುವುದು, ಭಕ್ತಿಗೀತೆ, ಧಾರ್ಮಿಕ ಪಠಣ, ರಸಪ್ರಶ್ನೆ ಹೀಗೆ ಹಲವು ವಿಭಾಗದಲ್ಲೂ ವಿದ್ಯಾರ್ಥಿಗಳ ಹೊಸತನ, ಸ್ವಚ್ಛಂದ ಕಲ್ಪನೆ ಮತ್ತು ಮನಮುಟ್ಟುವ ಅಭಿವ್ಯಕ್ತಿಗಳು ಗಮನಾರ್ಹವಾಗಿದ್ದವು. .
ಈ ಸಂದರ್ಭದಲ್ಲಿ ಸರ್ಕಾರಿ ಶಿಕ್ಷಣ ಇಲಾಖೆ ಅಧಿಕಾರಿಗಳು, ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ವಿದ್ಯಾ ಭೂಷಣ್ ಇಂಟರ್ ನ್ಯಾಷನಲ್ ಸ್ಕೂಲ್ ಮುಖ್ಯೋಪಾಧ್ಯಾಯರು ಶಿಕ್ಷಕ ಶಿಕ್ಷಕಿಯರು, ಅಂದ್ರಹಳ್ಳಿಯ ಸಮಸ್ತ ನಾಗರಿಕರು ಮಹಿಳೆಯರು ವಿದ್ಯಾರ್ಥಿಗಳು ಪೋಷಕರು ಮುಂತಾದವರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್




