ಬೆಂಗಳೂರು: ಕರ್ನಾಟಕದಲ್ಲಿ(Karnataka) ಬಾಡಿಗೆ ವಾಹನಗಳನ್ನು (ಟ್ಯಾಕ್ಸಿ, ಆಟೋ) ನಡೆಸುವ ಚಾಲಕರಿಗೆ ಕಡ್ಡಾಯವಾಗಿ ಕನ್ನಡ ಮಾತನಾಡಲು ಬರಬೇಕು. ಕನ್ನಡ(Kannada) ಬಾರದ ಚಾಲಕರ ಚಾಲನಾ ಪರವಾನಗಿ (DL) ಅನ್ನು ರದ್ದುಗೊಳಿಸಬೇಕು ಎಂದು ಕರವೇ ಆಗ್ರಹಿಸಿದೆ.
ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆ ಬಾರದ ಟ್ಯಾಕ್ಸಿ ಮತ್ತು ಆಟೋ ಚಾಲಕರ ಪರವಾನಗಿಯನ್ನು ರದ್ದುಪಡಿಸಲು ಅಲ್ಲಿನ ಬಿಜೆಪಿ ನೇತೃತ್ವದ ಸರ್ಕಾರ ದೃಢ ನಿರ್ಧಾರ ಕೈಗೊಂಡಿದೆ. ಇದೇ ನಿಯಮವನ್ನು ಇಲ್ಲಿಯೂ ಕರ್ನಾಟಕ ಸರ್ಕಾರ ಅನುಷ್ಠಾನಕ್ಕೆ ತರಬೇಕೆಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಗ್ರಹಿಸಿದ್ದಾರೆ.
ಕರವೇ ಎಕ್ಸ್ ಖಾತೆಯಲ್ಲಿ ಏನಿದೆ?
ಈ ನಿಯಮ ಮಹಾರಾಷ್ಟ್ರದಲ್ಲಿ ಮೇ 1ರಿಂದ ಜಾರಿಗೆ ಬರಲಿದೆ. ಈಗಾಗಲೇ ಸಾರಿಗೆ ಇಲಾಖೆಯ ಅಧಿಕಾರಿಗಳು ಆ ರಾಜ್ಯಾದ್ಯಂತ 59 ಆರ್ಟಿಒ ಕಚೇರಿಗಳಲ್ಲಿ ತಪಾಸಣೆ ನಡೆಸಿ, ಮರಾಠಿ ಓದಲು, ಬರೆಯಲು ಮತ್ತು ಮಾತನಾಡಲು ತಿಳಿಯದ ಚಾಲಕರ ಪರವಾನಗಿಗಳನ್ನು ರದ್ದುಗೊಳಿಸುವ ಕೆಲಸ ಆರಂಭಿಸಿರುವುದನ್ನು ಕರವೇ ಸ್ವಾಗತಿಸುತ್ತದೆ ಎಂದು ‘ಎಕ್ಸ್’ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
ಮಹಾರಾಷ್ಟ್ರ ಮಾದರಿ: ಮಹಾರಾಷ್ಟ್ರದಲ್ಲಿ ಈಗಾಗಲೇ ಅಲ್ಲಿನ ಪ್ರಾದೇಶಿಕ ಭಾಷೆ (ಮರಾಠಿ) ಬಾರದ ಚಾಲಕರಿಗೆ ಪರವಾನಗಿ ನೀಡದಿರುವ ಅಥವಾ ಕಠಿಣ ಕ್ರಮ ಕೈಗೊಳ್ಳುವ ನಿಯಮವಿದೆ.
ಇದನ್ನು ಕರ್ನಾಟಕದಲ್ಲೂ ಜಾರಿಗೆ ತಂದು ಕನ್ನಡಿಗರಿಗೆ ಮತ್ತು ರಾಜ್ಯದ ಭಾಷೆಗೆ ಆದ್ಯತೆ ನೀಡಬೇಕು ಎಂದು ಕರವೇ ಅಧ್ಯಕ್ಷ ಟಿ.ಎ ನಾರಾಯಣ ಗೌಡ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ತಮಿಳುನಾಡಿನಲ್ಲೂ ಅಲ್ಲಿನ ಚಾಲಕರು ಪರವಾನಗಿ ಪಡೆಯುವಾಗ ಅಥವಾ ನವೀಕರಿಸುವಾಗ ತಮಿಳು ಭಾಷೆಯಲ್ಲಿ ಕನಿಷ್ಠ ಮಟ್ಟದ ಜ್ಞಾನ ಇದೆಯೇ ಎಂದು ಪರೀಕ್ಷಿಸಲಾಗುತ್ತಿದೆ.
ಈ ಧೋರಣೆಯನ್ನು ಕರ್ನಾಟಕ ಸರ್ಕಾರವೂ ತಕ್ಷಣ ಅನುಸರಿಸಬೇಕು. ಕನ್ನಡ ಬಾರದ ಆಟೋ, ಟ್ಯಾಕ್ಸಿ, ಕ್ಯಾಬ್ ಮತ್ತು ಇತರ ಸಾರಿಗೆ ವಾಹನ ಚಾಲಕರ ಪರವಾನಗಿ ರದ್ದುಗೊಳಿಸುವ ಸ್ಪಷ್ಟ ನಿಯಮಾವಳಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.




