ತುರುವೇಕೆರೆ: ವ್ಯಕ್ತಿಯೋರ್ವ ತನ್ನ ಹೆಸರಿನಲ್ಲಿದ್ದ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಕಂದಾಯ ಅಧಿಕಾರಿಗಳು ಬೇರೆಯವರ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದಾರೆಂದು ಆರೋಪಿಸಿ ತಾಲೂಕು ಪಂಚಾಯ್ತಿ ಕಛೇರಿ ಆವರಣದಲ್ಲೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತುರುವೇಕೆರೆಯಲ್ಲಿ ನಡೆದಿದೆ.
ತುರುವೇಕೆರೆ ತಾಲ್ಲೂಕು ದೊಡ್ಡಾಘಟ್ಟ ಗ್ರಾಮದ ವಿಕಲಚೇತನ ರೈತ ಜಯಕುಮಾರ್ (50 ವರ್ಷ) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದಾರೆ. ಜಯಕುಮಾರ್ ತನ್ನ ಹೆಸರಿನಲ್ಲಿದ್ದ ಪಿತ್ರಾರ್ಜಿತವಾಗಿ ಬಂದಿದ್ದ ಆಸ್ತಿಯನ್ನು ಅನುಭವಿಸುತ್ತಿದ್ದರು. ಇದರೊಂದಿಗೆ ಅಮ್ಮಸಂದ್ರದಲ್ಲಿ ಸಣ್ಣ ಟೀ ಅಂಗಡಿಯನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ದೊಡ್ಡಾಘಟ್ಟ ಗ್ರಾಮದ ಲಕ್ಕಪ್ಪ ಎಂಬುವವರ ಮಗ ಜಯಕುಮಾರ್, ತನ್ನ ತಂದೆಯ ಹೆಸರಿನಲ್ಲಿದ್ದ 1.02 ಗುಂಟೆ ಮತ್ತು 11 ಗುಂಟೆ ಜಮೀನಿನ ಅನುಭವದಲ್ಲಿದ್ದರು. ಆದರೆ ಈ ಜಮೀನನ್ನು ಅದೇ ಗ್ರಾಮದ ಕೃಷ್ಣಪ್ಪ ಮತ್ತು ಗಂಗಮ್ಮ ಎಂಬುವವರ ಹೆಸರಿಗೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ ತಿಂಗಳವರೆಗೂ ಜಯಕುಮಾರ್ ಹಾಗೂ ತಂದೆ ಹೆಸರಿನಲ್ಲಿ ಬರುತ್ತಿದ್ದ ದಾಖಲೆಗಳು ಕೆಲವೇ ದಿನಗಳ ಅಂತರದಲ್ಲಿ ಮತ್ತೊಬ್ಬರ ಹೆಸರಿನಲ್ಲಿ ಬರುತ್ತಿದೆ ಎಂದು ಜಯಕುಮಾರ್ ಗೆ ತಿಳಿದು ಅನುಮಾನ ಬಂದು ಪಹಣಿ ಪಡೆದು ಪರಿಶೀಲಿಸಿದಾಗ ಜಯಕುಮಾರ್ ಹಾಗೂ ಅವರ ತಂದೆಗೆ ಸೇರಿದ ಜಮೀನು ಬೇರೆಯವರ ಹೆಸರಿಗೆ ಆಗಿರುವುದು ಕಂಡು ಗಾಬರಿಯಾಗಿದ್ದಾರೆ.
ಈ ಬಗ್ಗೆ ಕಂದಾಯ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಜಮೀನು ಬೇರೆಯವರ ಹೆಸರಿನಲ್ಲಿ ತೋರಿಸುತ್ತಿದ್ದು, ನಾವೇನು ಮಾಡಲು ಸಾಧ್ಯವಿಲ್ಲ. ನ್ಯಾಯಾಲಯಕ್ಕೆ ಹೋಗಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೇಳಿದ್ದಾರೆ. ಇದರಿಂದ ಗಾಬರಿಗೊಂಡ ಜಯಕುಮಾರ್ ವಿಷ ತಂದು ತಾಲೂಕು ಪಂಚಾಯ್ತಿ ಕಛೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷ ಕುಡಿದ ಕೆಲವೇ ನಿಮಿಷದಲ್ಲಿ ತಮ್ಮ ಗ್ರಾಮದ ಕುಮಾರಸ್ವಾಮಿ ಎನ್ನುವವರಿಗೆ ಕರೆ ಮಾಡಿ ಕಂದಾಯ ಇಲಾಖೆ ಅಧಿಕಾರಿಗಳು ನಮ್ಮ ಹೆಸರಿನ ಜಮೀನಿನ ದಾಖಲೆಗಳನ್ನು ಬೇರೆಯವರ ಹೆಸರಿಗೆ ಮಾಡಿದ್ದಾರೆ. ಜಮೀನು ವಿಚಾರದಲ್ಲಿ ಅನ್ಯಾಯವಾಗಿದ್ದು, ವಿಷ ಕುಡಿದಿರುವುದಾಗಿ ಹೇಳಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಕುಮಾರಸ್ವಾಮಿ, ಜಯಕುಮಾರ್ ರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ತುಮಕೂರು ಜಿಲ್ಲಾಧಿಕಾರಿಗಳ ಸಭೆಗೆ ತೆರಳಿದ್ದ ತಹಸೀಲ್ದಾರ್ ಕುಂಞ ಅಹಮದ್ ವಿಷಯ ತಿಳಿದು ಕಂದಾಯ ಇಲಾಖೆ ಅಧಿಕಾರಿಗಳಾದ ಶಿವಕುಮಾರ್, ಮಲ್ಲಿಕಾರ್ಜುನ್ ಅವರನ್ನು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿರುವ ರೈತನ ಆರೋಗ್ಯ ವಿಚಾರಿಸಿ, ಜಮೀನಿಗೆ ಸಂಬಂಧಿಸಿದಂತೆ ವಿವರ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಜಯಕುಮಾರ್ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.