ರಾಯಚೂರು :ನಗರದ ಜ್ಯೋತಿ ಕಾಲೋನಿಯ ಶ್ರೀ ಉದ್ಭವ ಹುತ್ತಿನ ಸೌದತ್ತಿ ಯಲ್ಲಮ್ಮನ ದೇವಸ್ಥಾನದಲ್ಲಿ ಭಾರತ ಹುಣ್ಣಿಮೆಯ ಪ್ರಯುಕ್ತವಾಗಿ ಉಚ್ಚಾಯ ಮಹೋತ್ಸವವನ್ನು ದೇವಸ್ಥಾನದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ವೆಂಕಟೇಶ ನಾಯಕರವರ ಅಧ್ಯಕ್ಷತೆಯಲ್ಲಿ ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಪ್ರದಾನ ಅರ್ಚಕರಾದ ರಾಜಶೇಖರಯ್ಯ ಸ್ವಾಮಿ ಶಾಸ್ತ್ರಿಗಳವರ ಪುರೋಹಿತ್ಯದಲ್ಲಿ ಯಲ್ಲಮ್ಮ ತಾಯಿಗೆ ಜಲಾಭಿಷೇಕ, ರುದ್ರಾಭಿಷೇಕ, ವಸ್ತ್ರಧಾರಣೆ ಪುಷ್ಪಾಲಂಕಾರ ಹಾಗೂ ಮಹಾಮಂಗಳಾರುತಿಯನ್ನು ಸರ್ವ ಸದ್ಭಕ್ತರ ಸಮ್ಮುಖದಲ್ಲಿ ಜರುಗಿದವು.
ಸಂಜೆ 06 ಗಂಟೆಗೆ ಯಲ್ಮಮ್ಮವ್ವನ ಉಚ್ಚಾಯ ಮಹೋತ್ಸವವು ವಿಶೇಷವಾಗಿ ಮಹಿಳೆಯರೇ ದೇವಸ್ಥಾನದಿಂದ ಕೂಗಳತೆಯ ದೂರದಲ್ಲಿರುವ ಪಾದಗಟ್ಟೆಯವರೆಗೆ ಎಳೆದು ಯಲ್ಲಮ್ಮವ್ವನ ಪುಣ್ಯ ಚರಣಗಳಿಗೆ ಪೂಜೆ ಸಲ್ಲಿಸಿ ಮರಳಿ ದೇವಸ್ಥಾನಕ್ಕೆ ತಲುಪಿಸಿದರು.
ಮಹಿಳೆಯರು ಎಳೆದ ಈ ಉಚ್ಚಾಯ ಮಹೋತ್ಸವದಲ್ಲಿ ಸರ್ವ ಸದ್ಭಕ್ತರು ಭಂಡಾರವನ್ನು ಹೆರಚಿ ಯಲ್ಲಮ್ಮವ್ವನ ಉಚ್ಚಾಯ ಮಹೋತ್ಸವಕ್ಕೆ ಭಂಡಾರದಿಂದ ಲೇಪನ ಮಾಡಿದರು.
ಉಚ್ಚಯ ಮಹೋತ್ಸವಕ್ಕಿಂತ ಮೊದಲು ದೇವಸ್ಥಾನದ ಹಿಂಬಾಗದಲ್ಲಿರುವ ಬೃಹದಾಕಾರದ ಬಂಡೆಯ ಬೆಟ್ಟದ ಬಹು ಎತ್ತರದಲ್ಲಿ ಜೋರಾಗಿ ಬೀಸುವ ಬಯಲು ಗಾಳಿಯಲ್ಲಿಯೂ ಒಂದು ಮಣ್ಣಿನ ಮಡಿಕೆಯ ಕೊಪ್ಪರಿಕೆಯಲ್ಲಿ ದೇವಸ್ಥಾನದ ಭಕ್ತರಾದ ಅನಿಲ ಮರ್ಚೇಡರವರು ಸಂಜೆ ಸುಮಾರು 06.30 ಗಂಟೆಗೆ ಮುಳ್ಳು ಕಲ್ಲುಗಳನ್ನು ಲೆಕ್ಕಿಸದೇ ಏಕಾಂಗಿಯಾಗಿ ಬೆಟ್ಟವನ್ನೇರಿ ಬೀಸುವ ಗಾಳಿಯಲ್ಲಿಯೂ ಬಂಡೆಯ ಮೇಲೆ ಕೊಪ್ಪರಿಕೆಯಲ್ಲಿ ಎಣ್ಣೆ ಬತ್ತಿಯನ್ನು ಹಾಕಿ ತಾಯಿ ಉದ್ಭವ ಹುತ್ತಿನ ಸೌದತ್ತಿ ಯಲ್ಲಮ್ಮನನ್ನು ಭಕ್ತಿಯಿಂದ ಮನದಲ್ಲಿ ನೆನೆದು ದೀಪವನ್ನು ಬೆಳಗಿದ ನಂತರವೇ ದೇವಸ್ಥಾನದಲ್ಲಿ ಮಹಾಮಂಗಳಾರುತಿ ಹಾಗೂ ಉಚ್ಚಾಯ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು.
ಹಾಗೇ ಬೀಸುವ ಗಾಳಿಯಲ್ಲಿ ಬೆಳಗಿದ ದೀಪವು ಸುಮಾರು 24 ಗಂಟೆಗಳ ಕಾಲ ಬೆಳಗುತ್ತಿರುವ ವಿಸ್ಮಯದ ದೀಪವನ್ನು ಕಂಡ ಭಕ್ತರು ಇದು ಉದ್ಭವ ಯಲ್ಲಮ್ಮವ್ವನ ಪವಾಡವೆಂದು ಸರ್ವರು ದೀಪದ ದರ್ಶನವನ್ನು ಪಡೆಯುತ್ತಾರೆ.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ನಾಗರಾಜ, ವೀರನಗೌಡ ಹಂಚಿನಾಳ, ಹನುಮಂತ ಪೋಲೀಸ, ವೆಂಕಟೇಶ ಮೇಸ್ತ್ರಿ, ಗೋವಿಂದರಾಜ ಹೊಸೂರು, ಶರಣು, ನರಸಿಂಹಲು ನಾಗಲಾಪೂರ, ಮಲ್ಲೇಶ ಮೇಸ್ತ್ರಿ, ಈರಣ್ಣ ಗೋರಿಂಟ್ಲು, ರಾಜು, ರಾಘವೇಂದ್ರ ಆಶಾಪೂರ, ಪಿಕಳಿಹಾಳ ಅಯ್ಯಪ್ಪ ಸ್ವಾಮಿ ಹಿರೇಮಠ, ಬ್ರಹ್ಮೇಂದ್ರ, ಹಾಗೂ ಬಡಾವಣೆಯ ನಗರದ ಸರ್ವ ಸದ್ಭಕ್ತರು ನೂರಾರು ಮಹಿಳೆಯರು ಯುವಕ, ಯುವತಿಯರು ಉಪಸ್ಥಿತರಿದ್ದರು.
ವರದಿ: ಗಾರಲದಿನ್ನಿ ವೀರನಗೌಡ