Ad imageAd image

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ ಯಶೋಗಾಥೆ

Bharath Vaibhav
ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ ಯಶೋಗಾಥೆ
WhatsApp Group Join Now
Telegram Group Join Now

ಮೊರಬ ಗ್ರಾಮದ ಕುರಿ ಸಾಕಾಣಿಕೆ ಕೇಂದ್ರಕ್ಕೆ ಶಾಸಕ, ಜಿಲ್ಲಾಧಿಕಾರಿ ಭೇಟಿ ರೈತನ ಸಾಹಸಕ್ಕೆ ಮೆಚ್ಚುಗೆ

ಧಾರವಾಡ :ಕುರಿ ಸಾಕಾಣಿಕೆಯಲ್ಲಿ ಮಾದರಿಯಾದ ಮೊರಬ ಗ್ರಾಮದ ರೈತ ಗಂಗಪ್ಪ ಕಾಲವಾಡ ಅವರ ಕುರಿಸಾಕಾಣಿಕೆ ಕೇಂದ್ರಕ್ಕೆ ಇಂದು ಮಧ್ಯಾಹ್ನ ಶಾಸಕ ಎನ್.ಎಚ್.ಕೋನರಡ್ಡಿ ಹಾಗೂ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಭೇಟಿ ನೀಡಿ, ಪ್ರಗತಿಪರ ರೈತನ ಸಾಹಸಕ್ಕೆ ಸೈ ಎಂದರು. ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ರೈತರು ಕೃಷಿ ಜೊತೆಗೆ ಉಪ ಕೃಷಿ ಚುಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಲಾಭದಾಯಕತೆ ಹೊಂದಲು ಸಹಾಯವಾಗುತ್ತದೆ. ಹವಾಮಾನ ವೈಪರಿತ್ಯದಿಂದಾಗಿ ಬೆಳೆಗಳಲ್ಲಿ ಬದಲಾವಣೆ ಆಗುತ್ತಿವೆ.ಇದರಿಂದ ಉತ್ಪಾದನೆ, ಲಾಭದ ಮೇಲೂ ಪರಿಣಾಮ ಬೀರುತ್ತಿದೆ ಎಂದರು.
ರೈತರು ಕೃಷಿ ಜೊತೆಗೆ ಕುರಿ-ಆಡು ಸಾಕಾಣಿಕೆ, ಹೈನುಗಾರಿಕೆ, ತೋಟಗಾರಿಕೆ, ಸಾವಯವ ಧಾನ್ಯ, ಮಿಶ್ರ ಬೆಳೆ, ಅವಕಾಶವಿದ್ದಲ್ಲಿ ಮೀನುಗಾರಿಕೆ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಒಂದರಲ್ಲಿ ನಷ್ಟವಾದರೂ ಇನ್ನೊಂದು ಕೈ ಹಿಡಿಯುತ್ತದೆ. ಇಲಾಖೆಯಿಂದ ಹೆಚ್ಚುಹೆಚ್ಚು ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು.


ಶಾಸಕ ಎನ್.ಎಚ್.ಕೋನರಡ್ಡಿ ಅವರು ಮಾತನಾಡಿ, ಗಂಗಪ್ಪ ಕಶಲವಾಡ ಪ್ರಗತಿಪರ ರೈತ. ಇವರ ಸಾಧನೆ ಉಳಿದ ರೈತರಿಗೂ ಮಾದರಿ ಆಗಿದೆ. ರಾಜ್ಯ ಸರಕಾರ ಕೃಷು ಜೊತೆಗೆ ಕೃಷಿಗೆ ಪೂರಕವಾದ ಉಪ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಇಲಾಖೆಗಳ ಮೂಲಕ ನೀಡುತ್ತಿದೆ. ರೈತರು ಈ ಯೋಜನೆ, ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ 2023 ರಿಂದ ರೈತ ಗಂಗಪ್ಪ ಕಾಲವಾಡ ಕೇಂದ್ರ ಸರಕಾರದ ರೂ. 50 ಲಕ್ಷ ಸಹಾಯಧನದ ಅನುದಾನ ಹಾಗೂ ಫಲಾನುಭವಿ ಪಾಲು ಮತ್ತು ಬ್ಯಾಂಕ್ ಸಾಲ ಸೇರಿ ರೂ.50 ಲಕ್ಷ ಯೋಜನಾ ಮೊತ್ತದ ಕುರಿಸಾಕಾಣಿಕೆ ಕೇಂದ್ರ ಆರಂಭಿಸಿದ್ದಾರೆ.

ರೈತ ಗಂಗಪ್ಪ ಕಾಲವಾಡ ಮಾತನಾಡಿ, ನನಗೆ 10 ಎಕರೆ ಜಮೀನು ಇದೆ. ಆದರೆ ಅಕಾಲಿಕ ಮಳೆ, ಪ್ರವಾಹ ಮತ್ತು ಬರ ಪರಿಸ್ಥಿತಿಯಿಂದ ಕೃಷಿಕಾಯಕ ನಿಂತು ಹೋಗುವ ಸ್ಥಿತಿಗೆ ಬಂದಿತ್ತು. ಇದೇ ಸಂದರ್ಭದಲ್ಲಿ ಪಶುಪಾಲನೆ ಇಲಾಖೆ ಅಧಿಕಾರಿಗಳು, ಪ್ರಗತಿಪರ ರೈತರಿಗೆ ಇಲಾಖೆ ಯೋಜನೆಗಳ ಪರಿಚಯ ಮತ್ತು ಪರ್ಯಾಯ ಕೃಷಿ ಬಗ್ಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಿ, ಮಾಇತಿ, ತರಬೇತಿ ನೀಡಿದರು.
ಉಪ ಕೃಷಿ ಯೋಜನೆಯಾಗಿ ನೀನು ಕುರಿ ಸಾಕಾಣಿಕೆ ಮಾಡು, ಇದೇ ಇಲಾಖೆಯ ಸಹಾಯಧನ, ಬೆಂಬಲ ಇದೆ ಎಂದರು. ಒಂದು ಗುಂಟೆ ಜಾಗದಲ್ಲಿ ಆರಂಭಿಸಿರುವ ನನ್ನ ಕುರಿ ಸಾಕಾಣಿಕೆ ಕೇಂದ್ರದಲ್ಲಿ ಇಂದು 500 ಕುರಿ, ನೂರಕ್ಕು ಹೆಚ್ಚು ಆಡುಗಳು, 300 ಕುರಿಮರಿಗಳು, 50 ಬೀಜದ ಟಗರು ಇವೆ. ವಾರದಲ್ಲಿ ಕನಿಷ್ಠ ನಾಲ್ಕು ದಿನ ಸಮೀಪದ ದನದ ಸಂತೆಗಳಿಗೆ ಹೋಗಿ ಕುರಿ, ಟಗರು ಮಾರಾಟ ಮಾಡುತ್ತೇವೆ ಎಂದು ತಿಳಿಸಿದರು.
ಒಂದು ಕುರಿ ಕನಿಷ್ಠ 10 ರಿಂದ 20 ಸಾವಿರ, ಆರು ತಿಂಗಳ ಕುರಿ ಮರಿ 5 ರಿಂದ 10 ಸಾವಿರ, ಟಗರು ಕನಿಷ್ಠ 15 ರಿಂದ 30 ಸಾವಿರ ಬೆಲೆಗೆ ಮಾರಾಟವಾಗುತ್ತವೆ. ಕುರಿ ಹಿಕ್ಕೆಯ ಗೊಬ್ಬರ ಪ್ರತಿ ಟೇಲರಗೆ 15 ರಿಂದ 20 ಸಾವಿರ ಬರುತ್ತದೆ.
ನಾವು ಹೂಡಿದ ಬಂಡವಾಳಕ್ಕಿಂತ ಹೆಚ್ಚು ಲಾಭ ಬಂದಿದೆ ಎಂದು ಅವರು ಹೇಳಿದರು. ಪಶು ಇಲಾಖೆ ಬೆಂಬಲ, ಸಹಾಯ ಸಾಕಷ್ಟಿದೆ ಎಂದು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.
ಪಶುಪಾಲನೆ ಇಲಾಖೆ ಉಪ ನಿರ್ದೇಶಕ ಡಾ.ರವಿ ಸಾಲಿಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಯೋಜನೆಯಡಿ ಶೇ.50 ಕ್ಕಿಂತ ಹೆಚ್ಚು ಸಹಾಯಧನ ರೈತನಿಗೆ ನೀಡಲಾಗಿದ್ದು, ಕೊನೆಯ ಕಂತಿನ ಸಹಾಯಧನ ಈ ತಿಂಗಳಲ್ಲಿ ಜಮೆ ಆಗುತ್ತದೆ. ಈ ಕುರಿ ಸಾಕಾಣಿಕೆ ಕೇಂದ್ರದ ಕುರಿಗಳು ಆಕಸ್ಮಿಕ ಸಾವಿಗೆ ತುತ್ತಾದಲ್ಲಿ ಪ್ರತಿ ಕುರಿಗೆ ರೂ.15 ಸಾವಿರ ಪರಿಹಾರ ನೀಡಲಾಗುತ್ತದೆ. ಅದಕ್ಕಾಗಿ ಪ್ರತಿ ಕುರಿಯನ್ನು ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ, ವಿಮೆಗೆ ಒಳಪಡಿಸಲಾಗಿದೆ ಎಂದರು.

ಪಶುಪಾಲನ ಇಲಾಖೆಯ ನವಲಗುಂದ ಸಹಾಯಕ ನಿರ್ದೇಶಕ ಡಾ.ಮನೋಹರ ದ್ಯಾಬೇರಿ ಅವರು ಸ್ವಾಗತಿಸಿ, ಗಂಗಪ್ಪ ಕಾಲವಾಡ ಅವರ ಯಶಸ್ಸಿನ ಯಶೋಗಾಥೆ ಕೇಳಿ, ನೋಡಿ ಈಗ ತಾಲೂಕಿನ ಇನ್ನೂ 3 ಜನ ರೈತರು ಇಂತಹ ಕುರಿ ಸಾಕಾಣಿಕೆ ಕೇಂದ್ರ ಮಾಡಲು ಮುಂದೆ ಬಂದಿದ್ದಾರೆ. ಅವರ ಪ್ರಸ್ತಾವನೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶಾಲಂ ಹುಸೇನ್, ತಹಶಿಲ್ದಾರ ಸುದೀರ ಸಾಹುಕಾರ, ರೈತ ಮುಖಂಡ ಮಲ್ಲಿಕಾರ್ಜುನ ಬಾಳನಗಾಡರ ಸೇರಿದಂತೆ ಅನೇಕ ಪ್ರಗತಿಪರ ರೈತರು, ಇತರರು ಉಪಸ್ಥಿತರಿದ್ದರು.

ವರದಿ:ವಿನಾಯಕ ಗುಡ್ಡದಕೇರಿ

WhatsApp Group Join Now
Telegram Group Join Now
Share This Article
error: Content is protected !!