ತುರುವೇಕೆರೆ: ತಾಲ್ಲೂಕು ಆಡಳಿತ, ತಾಲ್ಲೂಕು ಈಡಿಗ ಸಮಾಜ, ತಾಲ್ಲೂಕು ಕುಳುವ ಸಮಾಜದ ಸಂಯುಕ್ತಾಶ್ರಯದಲ್ಲಿ ಇಂದು ತಾಲ್ಲೂಕು ಕಛೇರಿ ಆವರಣದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅವರ 172ನೇ ಹಾಗೂ ಶರಣ ನುಲಿಯ ಚಂದಯ್ಯನವರ 919ನೇ ಜಯಂತ್ಯೋತ್ಸವವನ್ನು ಆಚರಿಸಲಾಯಿತು. ಗುರುದ್ವಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ದೀಪ ಬೆಳಗಿಸುವ ಮೂಲಕ ತಹಸೀಲ್ದಾರ್ ಕುಂಇ ಅಹಮದ್ ಜಯಂತಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ತಹಸೀಲ್ದಾರ್ ಕುಂಇ ಅಹಮದ್, ಒಂದೇ ದಿನ ಇಬ್ಬರು ಮಹಾನ್ ಸಂತರ ಜನ್ಮದಿನವನ್ನು ಆಚರಿಸುತ್ತಿರುವುದು ಸಂತೋಷವಾಗುತ್ತಿದೆ. ಬ್ರಹ್ಮಶ್ರೀ ನಾರಾಯಣಗುರು ಅವರು ಹಾಗೂ ಶರಣ ನುಲಿಯ ಚಂದಯ್ಯನವರು ಶೋಷಿತ ಸಮುದಾಯದ ಏಳಿಗೆಗೆ ಶ್ರಮಿಸಿದವರು, ಜಾತಿ ವ್ಯವಸ್ಥೆಯ ವಿರುದ್ದ ಹೋರಾಟ ನಡೆಸಿದವರು, ಬಸವಣ್ಣನವರ ತತ್ವಗಳಡಿಯಲ್ಲಿ ತಮ್ಮದೇ ಆದ ತತ್ವ ಆದರ್ಶಗಳನ್ನು ಸಮಾಜಕ್ಕೆ ನೀಡಿದ ಮಹಾನ್ ದಾರ್ಶನಿಕರು ಎಂದು ಬಣ್ಣಿಸಿದರು.

ಬ್ರಹ್ಮಶ್ರೀ ನಾರಾಯಣಗುರುಗಳು ಕೇರಳದಲ್ಲಿ ಜನಿಸಿ, ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿ ಎಲ್ಲಾ ಸಮುದಾಯದ ಸಮಾನತೆಗೆ ದುಡಿದವರು. ದೇವಾಲಯಕ್ಕೆ ಪ್ರವೇಶ ಎಲ್ಲರಿಗೂ ಮುಕ್ತವಾಗಬೇಕು, ಎಲ್ಲರೂ ದೇವಾಲಯಕ್ಕೆ ಹೋಗಿ ಭಗವಂತನ ದರ್ಶನ ಮಾಡಬೇಕೆಂಬ ಸಂಕಲ್ಪದಿಂದ ಬಹುದೊಡ್ಡ ಹೋರಾಟ ನಡೆಸಿ ಸಮಾನತೆಯ ಸಂದೇಶ ಸಾರಿದ ಮಹನೀಯರು. ಶರಣ ನುಲಿಯ ಚಂದಯ್ಯನವರು ಸರಳ ಜೀವನ ಸಾಗಿಸುತ್ತಾ ವಚನಗಳ ಮೂಲಕ ಸಹಬಾಳ್ವೆ, ಸಮಾನತೆ, ಶ್ರಮದ ಬದುಕಿಗೆ ಮೇಲ್ಪಂಕ್ತಿ ಹಾಕಿದ ಮಹಾನ್ ಶರಣರು ಎಂದರು.

ತಾಲ್ಲೂಕು ಈಡಿಗ ಸಮಾಜದ ಅಧ್ಯಕ್ಷ ಎಸ್.ಎಲ್.ಎನ್. ರಾಜಣ್ಣ, ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ಗೋಪಾಲ್, ಆರ್ಯ ಈಡಿಗರ ಸಂಘದ ಜಿಲ್ಲಾ ನಿರ್ದೇಶಕ ಮುಗಳೂರು ಮಂಜುನಾಥ್, ಗ್ರಾಪಂ ಮಾಜಿ ಅಧ್ಯಕ್ಷ ದೇವರಾಜ್, ಕಾಂಗ್ರೆಸ್ ಒಬಿಸಿ ಅಧ್ಯಕ್ಷ ಚೇತನ್ ಕುಮಾರ್, ಶೋಭಕುಮಾರ್, ಅನಿಲ್ ಕುಮಾರ್, ವೆಂಕಟೇಶ್, ತಾಲ್ಲೂಕು ಕುಳುವ ಸಮುದಾಯದ ಅಧ್ಯಕ್ಷ ಶ್ರೀನಿವಾಸ್, ಗೌರವಾಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷರಾದ ವಿಠಲ್ ಕುಮಾರ್, ಶಿವರಾಜ್, ರೇಣುಕಪ್ಪ, ಖಜಾಂಚಿ ಕರಿಯಪ್ಪ, ಸಹಕಾರ್ಯದರ್ಶಿ ಕುಮಾರ್, ಮಾಜಿ ಗೌರವಾಧ್ಯಕ್ಷ ರಾಮಾಂಜನಪ್ಪ, ಸಂಚಾಲಕರಾದ ಅಶೋಕ್, ಮಧು, ಮುನಿಸಿದ್ದಪ್ಪ, ಗೋವಿಂದಪ್ಪ, ಕಿರಣ್, ಪರಮೇಶ್, ಗಿರೀಶ್, ನವೀನ್ ಕುಮಾರ್ ಹಾಗೂ ದಬ್ಬೇಘಟ್ಟ ನಾಡಕಛೇರಿಯ ಉಪತಹಸೀಲ್ದಾರ್ ಶಿವಕುಮಾರ್, ಕಂದಾಯ ಇಲಾಖೆಯ ವತ್ಸಲ ಮುಂತಾದವರಿದ್ದರು.
ವರದಿ: ಗಿರೀಶ್ ಕೆ ಭಟ್


