ಬೆಂಗಳೂರು: ಸಾರ್ವಜನಿಕರ ಕುಂದುಕೊರತೆಗಳನ್ನು ತ್ವರಿತವಾಗಿ ಆಲಿಸಿ, ನಿಗದಿತ ಅವಧಿಯೊಳಗೆ ಸೂಕ್ತ ಪರಿಹಾರ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ.
ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಪ್ರತಿ ತಿಂಗಳ ಎಲ್ಲಾ ಶನಿವಾರಗಳಂದು 'ಪ್ರಜಾಸೇವಾ ಅಭಿಯಾನ' (ಜನಸ್ಪಂದನ ಸಭೆ) ಆಯೋಜಿಸಲು ತೀರ್ಮಾನಿಸಲಾಗಿದ್ದು, ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು (ಪ್ರಜಾ ಸೇವಾ ಇಲಾಖೆ) ವಿಸ್ತೃತ ಮಾರ್ಗಸೂಚಿ ಸುತ್ತೋಲೆ ಹೊರಡಿಸಿದೆ.ಈ ಅಭಿಯಾನವು ಇದೇ ಸೆಪ್ಟೆಂಬರ್ 5, 2026 ರಿಂದ ರಾಜ್ಯಾದ್ಯಂತ ಅಧಿಕೃತವಾಗಿ ಆರಂಭವಾಗಲಿದೆ.
ಮಾರ್ಗಸೂಚಿಯ ಪ್ರಮುಖ ಅಂಶಗಳು:
1. ಸಭಾ ಸ್ಥಳದಲ್ಲೇ ಉಚಿತ ನೋಂದಣಿ:
ಜನಸ್ಪಂದನ ಸಭೆಗಳಲ್ಲಿ ಸಾರ್ವಜನಿಕರಿಂದ ಸ್ವೀಕರಿಸಲಾಗುವ ಅರ್ಜಿ ಹಾಗೂ ದೂರುಗಳನ್ನು ಸಭಾ ಸ್ಥಳದಲ್ಲೇ ತೆರೆಯಲಾಗುವ 'ಗ್ರಾಮ ಒನ್' ಮತ್ತು 'ಕರ್ನಾಟಕ ಒನ್' ಕೇಂದ್ರಗಳ ಮೂಲಕ ಆನ್ಲೈನ್ನಲ್ಲಿ ದಾಖಲಿಸಲಾಗುತ್ತದೆ.
ಇದಕ್ಕೆ ಅಗತ್ಯವಿರುವ ಕಂಪ್ಯೂಟರ್ ಮತ್ತು ಸಿಬ್ಬಂದಿ (ಆಪರೇಟರ್) ವ್ಯವಸ್ಥೆಯನ್ನು ಜಿಲ್ಲಾಧಿಕಾರಿಗಳು ಉಚಿತವಾಗಿ ಕಲ್ಪಿಸಲಿದ್ದಾರೆ.
2. ದೂರುಗಳಿಗೆ ಪ್ರತ್ಯೇಕ ಎರಡು ಕ್ಯೂ (ಸರದಿ) ವ್ಯವಸ್ಥೆ: ಜನಸ್ಪಂದನ ದಿನದಂದು ಗೊಂದಲ ತಪ್ಪಿಸಲು ದೂರುಗಳನ್ನು ಎರಡು ಪ್ರತ್ಯೇಕ ಸರದಿಗಳಲ್ಲಿ ನಿರ್ವಹಿಸಲಾಗುತ್ತದೆ:
ಸರದಿ 1 (ಹೊಸ ದೂರುಗಳು): ಮೊದಲ ಬಾರಿಗೆ ಸಲ್ಲಿಕೆಯಾಗುತ್ತಿರುವ ಹೊಸ ಅರ್ಜಿಗಳು.
ಸರದಿ 2 (ಇತ್ಯರ್ಥವಾಗದ ದೂರುಗಳು): ಐಪಿಜಿಆರ್ಎಸ್ (IPGRS) ಪೋರ್ಟಲ್ನಲ್ಲಿ ಈಗಾಗಲೇ ದಾಖಲಾಗಿ, ಗರಿಷ್ಠ 21 ದಿನಗಳ ಗಡುವು ಮೀರಿದರೂ ಯಾವುದೇ ಕ್ರಮ ಅಥವಾ ತೃಪ್ತಿಕರ ಪರಿಹಾರ ಸಿಗದ ದೂರುಗಳು.
3. ಪ್ರತಿ ಬುಧವಾರ 3 ಹಂತದ ಪರಿಶೀಲನಾ ಸಭೆ: ಜನಸ್ಪಂದನದಲ್ಲಿ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿಗಾಗಿ ಪ್ರತಿ ಬುಧವಾರ ಮೂರು ಹಂತಗಳ ಕಡ್ಡಾಯ ಪರಿಶೀಲನಾ ವ್ಯವಸ್ಥೆ ಜಾರಿಯಲ್ಲಿರುತ್ತದೆ:
ಬೆಳಿಗ್ಗೆ 9:00 ರಿಂದ 11:00: ತಾಲೂಕು ಮಟ್ಟದ ಪರಿಶೀಲನೆ (ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯತ್ ಇಒ ನೇತೃತ್ವದಲ್ಲಿ).
ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 1:00: ಉಪ ವಿಭಾಗ ಮಟ್ಟದ ಪರಿಶೀಲನೆ (ಸಹಾಯಕ ಆಯುಕ್ತರ - AC ನೇತೃತ್ವದಲ್ಲಿ).
ಮಧ್ಯಾಹ್ನ 3:00 ರಿಂದ ಸಂಜೆ 5:00: ಜಿಲ್ಲಾ ಮಟ್ಟದ ಪರಿಶೀಲನೆ (ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ).
ತಮ್ಮ ದೂರಿನ ಪರಿಹಾರದಿಂದ ಅತೃಪ್ತರಾದ ನಾಗರಿಕರು ಈ ಪರಿಶೀಲನಾ ಸಭೆಗಳಿಗೆ ಖುದ್ದು ಹಾಜರಾಗಿ, ಅಧಿಕಾರಿಗಳ ಸಮ್ಮುಖದಲ್ಲೇ ನೇರವಾಗಿ ಇತ್ಯರ್ಥಪಡಿಸಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.
4. ಸರ್ಕಾರಿ ಯೋಜನೆಗಳ ಮಾಹಿತಿ ಪ್ರಸಾರ: ಸಭೆ ನಡೆಯುವ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಇಲಾಖಾವಾರು ಲಭ್ಯವಿರುವ ಐಇಸಿ (ಮಾಹಿತಿ, ಶಿಕ್ಷಣ ಮತ್ತು ಸಂವಹನ) ಅನುದಾನವನ್ನು ಬಳಸಿಕೊಳ್ಳುವಂತೆ ಉಪ ವಿಭಾಗಾಧಿಕಾರಿಗಳಿಗೆ ಸೂಚಿಸಲಾಗಿದೆ.
5. ನೌಕರರಿಗೆ ಪರ್ಯಾಯ ರಜೆ (Compensatory CL): ಜನಸ್ಪಂದನ ಕಾರ್ಯಕ್ರಮಗಳಿಗಾಗಿ ತಿಂಗಳ 2ನೇ ಮತ್ತು 4ನೇ ಶನಿವಾರದ ರಜಾ ದಿನಗಳಲ್ಲಿ ಕರ್ತವ್ಯ ನಿರ್ವಹಿಸುವ ಗ್ರೂಪ್ 'ಸಿ' ಮತ್ತು ಗ್ರೂಪ್ 'ಡಿ' ಸಿಬ್ಬಂದಿಗೆ ಜಿಲ್ಲಾಧಿಕಾರಿಗಳ ಹಂತದಲ್ಲಿ ಪರ್ಯಾಯ ಸಾಂದರ್ಭಿಕ ರಜೆ (Compensatory CL) ಮಂಜೂರು ಮಾಡಲು ಅವಕಾಶ ನೀಡಲಾಗಿದೆ. ಗ್ರೂಪ್ 'ಎ' ಮತ್ತು 'ಬಿ' ಅಧಿಕಾರಿಗಳಿಗೆ ರಜೆ ಮಂಜೂರಾತಿ ಕುರಿತು ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಸರ್ಕಾರದ ಉಪ ಕಾರ್ಯದರ್ಶಿ ಸುಮಾ ಬಿ.ಎಸ್. ತಿಳಿಸಿದ್ದಾರೆ.


