ಬೆಂಗಳೂರು: ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯ ಮಧ್ಯೆಯೇ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸಭೆಯಿಂದ ಹೊರನಡೆದಿರುವ ಹಠಾತ್ ಬೆಳವಣಿಗೆ ನಡೆದಿದೆ.
ಸಭೆಯಲ್ಲಿ ಸಚಿವ ಸಂಪುಟದ ಜವಾಬ್ದಾರಿ ಹಂಚಿಕೆ ಅಥವಾ ಇಲಾಖಾ ವಿಷಯಗಳ ಚರ್ಚೆಯ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪ್ರಸ್ತಾಪಕ್ಕೆ ಸಚಿವ ರಾಮಲಿಂಗಾರೆಡ್ಡಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆಗೆ ಸಂಬಂಧಿಸಿದ ವಿಷಯ ಮುನ್ನೆಲೆಗೆ ಬಂದಾಗ ಸಿಟ್ಟಿಗೆದ್ದ ರಾಮಲಿಂಗಾರೆಡ್ಡಿ ಅವರು, "ಜಲಸಂಪನ್ಮೂಲಕ್ಕೂ ನನಗೂ ಏನು ಸಂಬಂಧ? ನಾನು ಬೆಂಗಳೂರಿನವನು, ನನಗೆ ಬೆಂಗಳೂರೇ ಬೇಕು" ಎಂದು ನೇರವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಮಾಧಾನದ ಮಾತುಗಳಿಗೆ ಒಪ್ಪದ ಅವರು, ಸಭೆಯ ನಡುವೆಯೇ ಎದ್ದು ಹೊರನಡೆದಿದ್ದಾರೆ.
ಮಖ್ಯಮಂತ್ರಿಗಳ ನಿಲುವಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಸಚಿವರು, "ನನಗೆ ಬೇರೆ ಇಲಾಖೆ ಬೇಡ, ನಾನು ಕೇವಲ ಶಾಸಕನಾಗಿ ಇರುತ್ತೇನೆ ಸಾಕು" ಎಂದು ಬೇಸರದಿಂದ ನುಡಿದು ಸಭೆಯಿಂದ ನಿರ್ಗಮಿಸಿದ್ದಾರೆ. ಈ ಘಟನೆಯು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಆಂತರಿಕ ವಲಯದಲ್ಲಿ ಹಾಗೂ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ.

