ತುರುವೇಕೆರೆ : ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಿ ಮೇ 20 ರಂದು ರಾಷ್ಟ್ರಾದ್ಯಂತ ಔಷಧ ವ್ಯಾಪಾರಿಗಳು ಒಂದು ದಿನದ ಮುಷ್ಕರವನ್ನು ಹಮ್ಮಿಕೊಂಡಿದ್ದು, ತಾಲ್ಲೂಕಿನಲ್ಲಿಯೂ ಮುಷ್ಕರ ನಡೆಸಲಾಗುವುದು ಎಂದು ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ತುರುವೇಕೆರೆ ತಾಲ್ಲೂಕು ಅಧ್ಯಕ್ಷ ಎಂ.ನರಸಿಂಹಮೂರ್ತಿ ತಿಳಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಔಷಧಗಳ ಆನ್ಲೈನ್ ಮಾರಾಟ ನಿಲ್ಲಿಸುವುದು. ಕಾರ್ಪೋರೇಟ್ ವಿನಾಯಿತಿ ನಿಲ್ಲಿಸುವುದು. ನಕಲಿ ಔಷಧ ದೂರವಿಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದರು.
ಆಕ್ರಮಣಕಾರಿ ಬೆಲೆ ನಿಗದಿ, ತುರ್ತು ಅಧಿಸೂಚನೆಗಳನ್ನು ಹಿಂತೆಗೆದುಕೊಳ್ಳಬೇಕು. ಕೋವಿಡ್ ಸಮಯದಲ್ಲಿ ಮಾಡಲಾದ ಅಧಿಸೂಚನೆಯನ್ನು ಮುಂದುವರಿಸಿದ್ದು, ಅದನ್ನು ತಕ್ಷಣವೇ ರದ್ದುಗೊಳಿಸಬೇಕು. ಸರ್ಕಾರ ಸೂಕ್ತ ಕ್ರಮಕೈಗೊಳ್ಳದಿದ್ದರೆ ಅನಿರ್ದಿಷ್ಠಾವಧಿ ಮುಷ್ಕರ ಮಾಡಲಾಗುವುದು ಎಂದರು.
ಈ ಮುಷ್ಕರವು ರಾಷ್ಟ್ರಾದ್ಯಂತ ನಡೆಯಲಿದ್ದು, ದೇಶದಲ್ಲಿ ಸುಮಾರು 12 ಲಕ್ಷಕ್ಕೂ ಅಧಿಕ ಔಷಧ ವ್ಯಾಪಾರಸ್ಥರಿದ್ದು ಎಲ್ಲರೂ ತಮ್ಮ ತಮ್ಮ ಸ್ಥಳದಲ್ಲಿ ಮುಷ್ಕರ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ. ಅದೇ ರೀತಿ ಮೇ 20 ರಂದು ಬೆಳಿಗ್ಗೆ 10 ಗಂಟೆಗೆ ತುರುವೇಕೆರೆ ತಾಲ್ಲೂಕು ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು, ಔಷಧ ವ್ಯಾಪಾರಸ್ಥರು ಅಂಗಡಿ ಬಂದ್ ಮಾಡಿ ತಾಲೂಕು ಕಛೇರಿಗೆ ತೆರಳಿ ತಹಸೀಲ್ದಾರ್ ಅವರ ಮೂಲಕ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಔಷಧ ವ್ಯಾಪಾರಿಗಳ ಸಂಘದ ಒಂದು ದಿನದ ಮುಷ್ಕರದ ಹಿನ್ನೆಲೆ ಗ್ರಾಹಕರಿಗೆ, ನಾಗರೀಕರಿಗೆ ಉಂಟಾಗುವ ತೊಂದರೆಗೆ ಸಂಘ ವಿಷಾಧ ವ್ಯಕ್ತಪಡಿಸುತ್ತದೆ. ಸಂಘದ ಮುಷ್ಕರವು ನಕಲಿ ಔಷಧ ತಡೆಗಟ್ಟುವುದು ಸೇರಿದಂತೆ ನಾಗರೀಕರ ಹಿತದೃಷ್ಟಿಯಿಂದ ಕೂಡಿದ್ದಾಗಿರುವುದರಿಂದ ನಾಗರೀಕರು ಸಹಕಾರ ನೀಡಬೇಕೆಂದು ಕೋರಿದರು.
ವರದಿ : ಗಿರೀಶ್ ಕೆ ಭಟ್

