ದಾವಣಗೆರೆ: "ನಾನು ಸಿಎಂ ಡಿ.ಕೆ. ಶಿವಕುಮಾರ್ (Dk shivakumar ) ಅವರ ಮನೆಮಗ ಇದ್ದಂತೆ. ಶಿವನ ಮುಂದಿರುವ ಬಸವ ನಾನು, ನಾನೇ ಮುಖ್ಯಮಂತ್ರಿ ಇದ್ದ ಹಾಗೆ. ಮನೆಮಗನಿಗೆ ಅವರ ಆಶೀರ್ವಾದ ಸದಾ ಇದ್ದೇ ಇರುತ್ತದೆ" ಎಂದು ಚನ್ನಗಿರಿ ಕ್ಷೇತ್ರದ ಶಾಸಕ ಶಿವಗಂಗಾ ಬಸವರಾಜ್ (Shivaganga basavraj ) ಮಾರ್ಮಿಕವಾಗಿ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಹಾಗೂ ಸಚಿವ ಸ್ಥಾನದ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡರು.
ಪಕ್ಷದಲ್ಲಿ ಹಲವು ಹಿರಿಯ ಶಾಸಕರಿದ್ದು, ತಮಗೂ ಸಚಿವ ಸ್ಥಾನದ ನಿರೀಕ್ಷೆಯಿತ್ತು ಆದರೆ ಅವಕಾಶ ಲಭಿಸಿಲ್ಲ ಎಂದು ತಮ್ಮ ಮನದಾಳದ ಇಂಗಿತ ವ್ಯಕ್ತಪಡಿಸಿದರು.
ಸದ್ಯಕ್ಕೆ ಸಚಿವ ಸ್ಥಾನಕ್ಕಿಂತಲೂ ತಮ್ಮ ಚನ್ನಗಿರಿ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ತಿಳಿಸಿದ ಶಾಸಕರು, ತಾವು ಮೊದಲ ಬಾರಿಗೆ ಗೆದ್ದಿರುವುದರಿಂದ ಮುಂದೆ ಸಾಕಷ್ಟು ಅವಕಾಶಗಳಿವೆ ಎಂದರು. ರೈತರ ಕೋಟಾದಡಿ ಸಚಿವ ಸ್ಥಾನ ಕೇಳಿದ್ದು, ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಿದರೂ ಜವಾಬ್ದಾರಿಯಿಂದ ನಿಭಾಯಿಸುವುದಾಗಿ ಹೇಳಿದರು.


