ಹುಬ್ಬಳ್ಳಿ : ಜಾರಿ ನಿರ್ದೇಶನಾಲಯ(ಇಡಿ) ದಾಳಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಅವರಿಗೆ ಸಂಬಂಧಿಸಿದವರ ಆಸ್ತಿ, ಹೂಡಿಕೆ ಮತ್ತು ವಹಿವಾಟುಗಳ ಕುರಿತು ಹಲವು ವಿಚಾರಗಳು ಬಹಿರಂಗವಾಗಿರುವ ಹಿನ್ನೆಲೆಯಲ್ಲಿ, ಇದರ ತನಿಖೆ ಪೂರ್ಣಗೊಳ್ಳುವವರೆಗೆ ಅವರು ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಆಗ್ರಹಿಸಿದರು.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದೆರಡು ದಿನಗಳಿಂದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಅವರಿಗೆ ಸಂಬಂಧಿಸಿದ ಸುಮಾರು 18 ಸ್ಥಳಗಳಲ್ಲಿ ಇಡಿ ಶೋಧ ನಡೆಸಿದೆ.
ಅದು ನೀಡಿರುವ ಮಾಹಿತಿಯಂತೆ 3 ಕೋಟಿ ರೂ.ಗೂ ಅಧಿಕ ನಗದು ಹಾಗೂ ವಿದೇಶಿ ಕರೆನ್ಸಿ ಪತ್ತೆಯಾಗಿದೆ. ಅಲ್ಲದೆ, ಸಚಿವರು ಮತ್ತು ಅವರ ಕುಟುಂಬದ ಸದಸ್ಯರು ವಿದೇಶಿ ಕಂಪನಿಗಳಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ಮಾಡಿರುವ ವಿಚಾರವೂ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದ ಕಂಪನಿಯೊಂದಕ್ಕೆ 2,477 ಕೋಟಿ ರೂ. ಮೊತ್ತದ ಟೆಂಡರ್ ಅನ್ನು ನಿಯಮ ಉಲ್ಲಂಘಿಸಿ ನೀಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಹೂಡಿಕೆಯ ಹಣ ಎಲ್ಲಿಂದ ಬಂತು, ಯಾವ ಕಂಪನಿಗಳಿಗೆ ಹಣ ಹೋಗಿದೆ, ಟೆಂಡರ್ ನೀಡುವಲ್ಲಿ ಯಾವುದೇ ಕಿಕ್ಬ್ಯಾಕ್ ನಡೆದಿದೆಯೇ, ಯಾರಿಗೆ ಹಣ ಅಥವಾ ಬೇರೆ ಅನುಕೂಲ ಕಲ್ಪಿಸಲಾಗಿದೆ ಎಂಬುದರ ಸಂಪೂರ್ಣ ತನಿಖೆಯಾಗಬೇಕು, ಅಲ್ಲಿಯವರೆಗೆ ಸಚಿವರು ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ತನಿಖೆಯಲ್ಲಿ ಅವರು ನಿರ್ದೋಷಿ ಎಂದು ಸಾಬೀತಾದರೆ ಮತ್ತೆ ಸಚಿವರಾಗುವುದಕ್ಕೆ ಬಿಜೆಪಿಗೆ ಯಾವುದೇ ತಕರಾರಿಲ್ಲ, ತಪ್ಪಿತಸ್ಥರೆಂದು ಸಾಬೀತಾದರೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು.
ಈ ದಾಳಿಯಲ್ಲಿ ಬಿಜೆಪಿಯ ಯಾವುದೇ ಪಾತ್ರವಿಲ್ಲ. ಸತೀಶ ಜಾರಕಿಹೊಳಿ ಅವರೇ ತಮ್ಮ ಪಕ್ಷದವರೇ ಇಡಿಗೆ ದೂರು ನೀಡಿದ್ದಾರೆ ಎಂದು ಹೇಳಿರುವುದರಿಂದ, ದೂರು ನೀಡಿದವರು ಯಾರು ಎಂಬುದಕ್ಕಿಂತ ತನಿಖೆಯಲ್ಲಿ ಜನರ ಹಣದ ವಹಿವಾಟು ಎಲ್ಲಿಗೆ ಹೋಗಿದೆ ಎಂಬುದು ಮುಖ್ಯ ಎಂದು ಶಾಸಕ ಬೆಲ್ಲದ ಹೇಳಿದರು.


