ಹರಿಯಾಣದ ಕುರುಕ್ಷೇತ್ರದಲ್ಲಿ ಬೆಚ್ಚಿಬೀಳಿಸುವ ಘಟನೆ. ಮಹಿಳೆಯೊಬ್ಬರು ತನ್ನ ಪತಿಯನ್ನು ಚಾಕುವಿನಿಂದ ಭೀಕರವಾಗಿ ಹತ್ಯೆ ಮಾಡಿ, ಆತನ ಹೊಟ್ಟೆಯನ್ನು ಸೀಳಿ ಕರುಳುಗಳನ್ನು ಹೊರತೆಗೆದಿದ್ದಾರೆ. ಘಟನೆ ಬೆಳಕಿಗೆ ಬಂದ ಬಳಿಕ ಆಕೆ ಮನೆಯ ಮೇಲ್ಛಾವಣಿಯಿಂದ ಜಿಗಿದು ಗಾಯಗೊಂಡಿದ್ದಾಳೆ.
ಮೃತರನ್ನು ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಮೂಲದ ರಾಜೇಶ್ ಎಂದು ಗುರುತಿಸಲಾಗಿದೆ. ಅವರು ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ಕುರುಕ್ಷೇತ್ರದಲ್ಲಿ ಪತ್ನಿ ವಿಮ್ಲಾ ದೇವಿ ಜೊತೆ ವಾಸಿಸುತ್ತಿದ್ದರು. ಪೆಹೋವಾ ರಸ್ತೆಯಲ್ಲಿ ನೀರು ಪೂರೈಕೆ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.
ಜಗಳದ ಬಳಿಕ ಭೀಕರ ಹತ್ಯೆ
ಸಂಜೆ ಸುಮಾರು 5 ಗಂಟೆಗೆ ರಾಜೇಶ್ ಮತ್ತು ವಿಮ್ಲಾ ಜಗಳವಾಡುತ್ತಿರುವ ಶಬ್ದವನ್ನು ಮನೆಯ ಮಾಲೀಕ ಕೇಳಿದ್ದಾರೆ.
ತಕ್ಷಣ ಮೇಲ್ಛಾವಣಿಗೆ ತೆರಳಿದಾಗ ರಾಜೇಶ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಮತ್ತೊಂದೆಡೆ, ವಿಮ್ಲಾ ಆತನ ಕರುಳುಗಳನ್ನು ಚೀಲವೊಂದರಲ್ಲಿ ಹಾಕುತ್ತಿದ್ದಳು ಎಂದು ವರದಿಯಾಗಿದೆ.
ಮನೆಯ ಮಾಲೀಕನನ್ನು ನೋಡಿದ ಕೂಡಲೇ ವಿಮ್ಲಾ ಗಾಬರಿಗೊಂಡು ಮೇಲ್ಛಾವಣಿಯಿಂದ ಕೆಳಗೆ ಜಿಗಿದಿದ್ದಾಳೆ. ಈ ವೇಳೆ ಆಕೆಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


