ಬೆಂಗಳೂರು: ಕುಂದಾನಗರಿ ಬೆಳಗಾವಿಯಲ್ಲಿ ಇಂದು (ಶುಕ್ರವಾರ) ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ ಎಸ್) ಮಹತ್ವದ ವಾರ್ಷಿಕ ಸಭೆ ಆರಂಭವಾಗುತ್ತಿದ್ದು, ಈ ಸಭೆಯ ಕುರಿತಾಗಿ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೆಪಿಸಿಸಿ ಪ್ರಮುಖರಾದ ಬಿ.ಕೆ. ಹರಿಪ್ರಸಾದ್ ಅವರು ಅತ್ಯಂತ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಬೆಳಗಾವಿಯಲ್ಲಿ ಆರ್ ಎಸ್ ಎಸ್ ವಾರ್ಷಿಕ ಸಭೆ ಹಮ್ಮಿಕೊಂಡಿರುವುದರ ಹಿಂದೆ ಸಂಶಯಗಳಿದ್ದು, ಈ ಸಭೆಯ ಮುಕ್ತಾಯದ ನಂತರ ರಾಜ್ಯದಲ್ಲಿ ಏನಾದರೂ ಅನಾಹುತಗಳು ಸಂಭವಿಸಬಹುದು ಎಂದು ಅವರು ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಕೆ. ಹರಿಪ್ರಸಾದ್ ಅವರು ಸಂಘ ಪರಿವಾರದ ಸಭೆಯ ಉದ್ದೇಶವನ್ನು ಬಹಿರಂಗವಾಗಿ ಪ್ರಶ್ನಿಸಿದ್ದಾರೆ.
"ಆರ್ ಎಸ್ ಎಸ್ ಸಂಘಟನೆಯು ಬೆಳಗಾವಿಯನ್ನೇ ಗುರಿಯಾಗಿಸಿಕೊಂಡು ಈ ವಾರ್ಷಿಕ ಸಭೆಯನ್ನು ಯಾಕೆ ನಡೆಸುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಇತಿಹಾಸವನ್ನು ಗಮನಿಸಿದರೆ, ಹಿಂದೆ ಇವರ ಸಭೆಗಳು ಮುಗಿದ ಬಳಿಕ ಸಮಾಜದಲ್ಲಿ ಏನಾದರೂ ಒಂದು ಅಹಿತಕರ ಘಟನೆ ಅಥವಾ ಅನಾಹುತಗಳು ಸಂಭವಿಸಿರುವ ಉದಾಹರಣೆಗಳಿವೆ.
ಹೀಗಾಗಿ, ಪ್ರಸ್ತುತ ನಡೆಯುತ್ತಿರುವ ಬೆಳಗಾವಿ ಸಭೆಯ ಬಳಿಕ ರಾಜ್ಯದಲ್ಲಿ ಮತ್ತೇನಾಗಲಿದೆಯೋ ಎಂಬ ಆತಂಕ ಎದುರಾಗಿದೆ, ಇದನ್ನು ನಾವು ಕಾದು ನೋಡಬೇಕಿದೆ," ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.


