ವೈದ್ಯೆಯಾಗುವ ಕನಸು ಹೊತ್ತಿದ್ದ 16 ವರ್ಷದ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳು ಪೋಷಕರ ಬುದ್ಧಿಮಾತಿಗೆ ಮನನೊಂದು ನೇಣಿಗೆ ಶರಣಾದ ಹೃದಯವಿದ್ರಾವಕ ಘಟನೆ ನೆಲಮಂಗಲ ತಾಲೂಕಿನ ಭೈರೇಗೌಡನಹಳ್ಳಿಯಲ್ಲಿ ನಡೆದಿದೆ.
ರಾಘವೇಂದ್ರ ಹಾಗೂ ಜ್ಯೋತಿ ದಂಪತಿಯ ಮೊದಲ ಮಗಳಾದ ಸಂಧ್ಯಾ (16) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಸಂಧ್ಯಾ ಇತ್ತೀಚೆಗಷ್ಟೇ ಹೊರಬಂದ ಎಸ್ಎಸ್ಎಲ್ಸಿ (SSLC) ಫಲಿತಾಂಶದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಳು.ಮುಂದೆ ಎಂಬಿಬಿಎಸ್ (MBBS) ಮಾಡಿ ವೈದ್ಯೆಯಾಗಬೇಕೆಂಬ ದೊಡ್ಡ ಗುರಿಯನ್ನು ಹೊಂದಿದ್ದಳು.
ಮನೆಯಲ್ಲಿರದೆ ಸ್ನೇಹಿತರ ಜೊತೆ ಅತಿಯಾಗಿ ಸುತ್ತಾಡುತ್ತಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಪೋಷಕರು ಸಂಧ್ಯಾಗೆ ಬುದ್ಧಿವಾದ ಹೇಳಿದ್ದರು.
ವಯಸ್ಸಿಗೆ ಬಂದ ಹೆಣ್ಣುಮಗಳು ಜವಾಬ್ದಾರಿಯಿಂದ ಇರಬೇಕು ಎಂದು ಪೋಷಕರು ನೀಡಿದ ಸಲಹೆಯನ್ನು ಬಾಲಕಿ ತಪ್ಪಾಗಿ ಅರ್ಥೈಸಿಕೊಂಡಿದ್ದಾಳೆ ಎನ್ನಲಾಗಿದೆ.
ಇದರಿಂದ ತೀವ್ರವಾಗಿ ಮನನೊಂದಿದ್ದ ಆಕೆ, ಮನೆಯವರು ಆಸ್ಪತ್ರೆಯಲ್ಲಿದ್ದ ಅಜ್ಜಿಯನ್ನು ನೋಡಲು ಹೋದ ಸಂದರ್ಭದಲ್ಲಿ ಮನೆಯ ರೂಂನ ಫ್ಯಾನ್ಗೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾಳೆ.

