ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸುವಂತಹ ಸ್ಫೋಟಕ ಹೇಳಿಕೆಗಳು ಹೊರಬಿದ್ದಿವೆ.
ಬಿಜೆಪಿ ಬಂಡಾಯ ಶಾಸಕರಾದ ಎಸ್ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರು ತಮಗೆ ಗೌರವ ನೀಡದ ಬಿಜೆಪಿ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೆ, ಮುಕ್ತವಾಗಿ ಕಾಂಗ್ರೆಸ್ ಪರ 'ಆತ್ಮಸಾಕ್ಷಿ ಮತ' ಚಲಾಯಿಸಿರುವುದಾಗಿ ಇಂಗಿತ ವ್ಯಕ್ತಪಡಿಸಿರುವ ಸೋಮಶೇಖರ್, "ನನಗೆ ಇನ್ಮುಂದೆ ಬಿಜೆಪಿಯವರ ಸಹವಾಸವೇ ಬೇಡ" ಎಂದು ಕಡಕ್ ಆಗಿ ಹೇಳುವ ಮೂಲಕ ಕೇಸರಿ ಪಾಳಯಕ್ಕೆ ಬಿಗ್ ಶಾಕ್ ನೀಡಿದ್ದಾರೆ.
ಸಿಎಂ ಕರೆ ಮಾಡಿದ್ರು, ವಂಡರ್ ಲಾಗೆ ಹೋಗಿದ್ದೆ: ಎಸ್ಟಿ ಸೋಮಶೇಖರ್ ಮುಕ್ತ ಮಾತು
ಮತದಾನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಎಸ್ಟಿ ಸೋಮಶೇಖರ್, ತಮ್ಮ ನಿರ್ಧಾರದ ಹಿಂದಿನ ಅಸಲಿ ಕಾರಣವನ್ನು ಬಿಚ್ಚಿಟ್ಟರು.
ಮತದಾನ ಮಾಡುವ ಹಕ್ಕು ಎಲ್ಲ ಶಾಸಕರಿಗೂ ಇದೆ. ನಮಗೆ ವೋಟ್ ಬೇಕು ಎಂದರೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ನವರು ಬಂದು ಕೇಳಬೇಕಿತ್ತು.
ಆದರೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ನಮ್ಮನ್ನು ಸಂಪರ್ಕಿಸುವ ಸೌಜನ್ಯವನ್ನೂ ತೋರಿಸಲಿಲ್ಲ. ಇದೇ ವೇಳೆ ಸ್ವತಃ ಮುಖ್ಯಮಂತ್ರಿಗಳು ನನಗೆ ಕರೆ ಮಾಡಿ ಬೆಂಬಲ ಕೋರಿದ್ದರು.
ಹಾಗಾಗಿಯೇ ನಾನು ಕಾಂಗ್ರೆಸ್ ನಾಯಕರಿದ್ದ ವಂಡರ್ ಲಾ ರೆಸಾರ್ಟ್ಗೆ ಹೋಗಿದ್ದೆ" ಎಂದು ಬಹಿರಂಗಪಡಿಸಿದರು.


