ಬೆಂಗಳೂರು : ರಾಜ್ಯ ಕಾಂಗ್ರೆಸ್ನಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಒತ್ತಡ, ಸಿಎಂ ಬಣ ಸಚಿವರು ಸಿದ್ದರಾಮಯ್ಯ ಪರ ಹೇಳಿಕೆಯಿಂದ ಉಂಟಾಗಿರುವ ಆಂತರಿಕ ಬಿಕ್ಕಟ್ಟು ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರತಿಕ್ರಿಯೆ ವೇಳೆ ಗರಂ ಆದರು.
ಪಕ್ಷದಲ್ಲಿ ಎದುರಾಗಿರುವ ಬಣ ನಾಯಕರ ಹೇಳಿಕೆ ಗೊಂದಲಗಳಿಗೆ ಅದನ್ನು ಯಾರು ಸೃಷ್ಟಿ ಮಾಡಿದ್ದಾರೋ ಅವರನ್ನೇ ಅವರೇ ಬಗೆಹರಿಸಬೇಕು ಎಂದರು.
ಗೊಂದಲಗಳನ್ನು ಯಾರು ಆರಂಭಿಸಿದರೋ ಅವರನ್ನೇ ಕೇಳುವ ಬದಲು ನಮ್ಮನ್ನೇ ಕೇಳಿದರೆ ಹೇಗೆ? ನಮ್ಮ ಸಹನೆಗೂ ಒಂದು ಮಿತಿ ಇರುತ್ತಲ್ವಾ? ಯಾರು, ಯಾವಾಗ ಶುರು ಮಾಡಿದ್ದಾರೋ ಅವರೇ ಈ ಸಮಸ್ಯೆಯನ್ನು ಮುಗಿಸಬೇಕಲ್ಲವೇ ಎಂದು ಪರೋಕ್ಷವಾಗಿ ವಿರೋಧಿ ಬಣಕ್ಕೆ ತಿರುಗೇಟು ನೀಡಿದರು.
ಸಿಎಂ ಅಧಿಕಾರದ ಹಂಚಿಕೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಎಲ್ಲಿ ಹೋದರೂ ಇದೇ ಪ್ರಶ್ನೆಗಳನ್ನು ನಮ್ಮನ್ನೇ ಕೇಳಬೇಡಿ. ಆ ಎಲ್ಲಾ ಸಮಸ್ಯೆಗಳನ್ನು ಹುಟ್ಟುಹಾಕಿದವರಿಗೆ ಹಾಗೂ ಸಮಸ್ಯೆ ಬಗೆಹರಿಸಬಲ್ಲ ಅಧಿಕೃತ ಸ್ಥಾನದಲ್ಲಿರುವವರನ್ನು ಕೇಳಿ ಎಂದು ತಿಳಿಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸುವಂತೆ ನಾವೇನು ಪಟ್ಟು ಹಿಡಿದಿಲ್ಲ. ಹೈಕಮಾಂಡ್ ನಮಗೆ ದೇವಸ್ಥಾನವಿದ್ದಂತೆ. ನಾವು ಪ್ರಾರ್ಥನೆ ಮಾಡಿಕೊಂಡಿದ್ದೇವಷ್ಟೇ ಎಂದು ನಿನ್ನೆಯಷ್ಟೇ ಜಾರಕಿಹೊಳಿ ಅವರು ಅಭಿಪ್ರಾಯಪಟ್ಟಿದ್ದರು.