ಹುಬ್ಬಳ್ಳಿ: 6ನೇ ತರಗತಿಯ ಬಾಲಕನೊಬ್ಬ ತನ್ನ 9ನೇ ತರಗತಿಯ ಸಹಪಾಠಿಯನ್ನು ಇರಿದು ಕೊಂದಿರುವಂತಹ ಶಾಕಿಂಗ್ ಘಟನೆ ಹುಬ್ಬಳ್ಳಿ ನಗರದ ಗುರುಸಿದ್ದೇಶ್ವರ ನಗರದಲ್ಲಿ ನಡೆದಿದೆ.
ಗುರುಸಿದ್ದೇಶ್ವರ ನಗರದ ನಿವಾಸಿಯಾಗಿರೋ 15 ವರ್ಷದ ಚೇತನ್ ರಕ್ಕಸಗಿ ಕೊಲೆಯಾದ ಬಾಲಕ.ಆತನ ಮನೆ ಮುಂದೆಯೇ ಇದ್ದ ಸ್ನೇಹಿತ 13 ವರ್ಷದ ಬಾಲಕ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಮೇ 12 ರಂದು ಸಂಜೆ ಏಳು ಗಂಟೆ ಸಮಯದಲ್ಲಿ ಮನೆಯಿಂದ ಚಾಕು ತಂದ ಬಾಲಕ ಚೇತನ್ ನ ಹೊಟ್ಟೆಯ ಎಡಬಾಗದಲ್ಲಿ ಇರದಿದ್ದಾನೆ.
ಈ ವೇಳೆ ಚೇತನ್ ಕುಸಿದು ಬಿದ್ದಿದ್ದಾನೆ. ಈ ವೇಳೆ ಅಕ್ಕ ಪಕ್ಕದಲ್ಲಿದ್ದ ಇತರ ಮಕ್ಕಳು ಚೀರಾಡಿದ್ದಾರೆ. ತಕ್ಷಣ ಆರೋಪಿ ಬಾಲಕನ ತಾಯಿ ಓಡಿ ಬಂದು ಚೇತನ್ನನ್ನು ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಾಗಲೇ ಬಾಲಕ ಸಾವನ್ನಪ್ಪಿದ್ದಾನೆ.
ವರದಿಗಳ ಪ್ರಕಾರ ಆರೋಪಿ ಬಾಲಕ ಹಾಗೂ ಮೃತ ಬಾಲಕರಿಬ್ಬರೂ ಎದುರು ಬದುರು ಮನೆಯವರು ಮಾತ್ರವಲ್ಲದೇ ಪರಮಾಪ್ತ ಸ್ನೇಹಿತರು. ಶಾಲೆಗೆ ರಜೆ ಇದ್ದಿದ್ದರಿಂದ ಮಕ್ಕಳೆಲ್ಲರೂ ಸೇರಿಕೊಂಡು ರಜಾದ ದಿನಗಳನ್ನು ಆಟವಾಡಿಕೊಂಡು ಕಳೆಯುತ್ತಿದ್ದರು.
ಆದರೆ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದಿದ್ದು, ಸಿಟ್ಟಾದ ಬಾಲಕ ಸೀದಾ ಮನೆಗೆ ಹೋಗಿ ಚಾಕು ಹಿಡಿದುಕೊಂಡು ಬಂದು ಚೇತನ್ ಹೊಟ್ಟೆಗೆ ಇರಿದಿದ್ದಾನೆ.
ಇದೀಗ ಘಟನೆಗೆ ಸಂಬಂಧಿಸಿದಂತೆ ಕಮರಿಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕೊಲೆ ಮಾಡಿದ ಬಾಲಕನನ್ನು ಬಾಲ ಮಂದಿರಕ್ಕೆ ಕಳುಹಿಸಿದ್ದಾರೆ.